ವಸಂತರತ್ನ ಕಲಾ ಪ್ರತಿಷ್ಠಾನ ಕಳೆದ ವರ್ಷದಂತೆ ಈ ಸಲವೂ ಸಿನರ್ಜಿ ಪ್ರಾಪರ್ಟಿ ಡೆವಲೆಪ್ಮೆಂಟ್ ಸಹಯೋಗದಲ್ಲಿ ಹುತಾತ್ಮ ಯೋಧರ 6 ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಮತ್ತು ವಿಕಲಾಂಗ ಮಕ್ಕಳ ಏಳಿಗೆಯಲ್ಲಿ ತೊಡಗಿಸಿಕೊಂಡ ಆಶಾ ಶಾಲೆಗೆ ದೇಣಿಗೆ ಚೆಕ್ ನೀಡಿತು.
ಕಾಮರಾಜ ರಸ್ತೆಯ ಸೇನಾ ಶಾಲೆಯಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ಮುಖ್ಯಸ್ಥ ಲೆ.ಜನರಲ್ ಪ್ರಧಾನ್, ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್, ಸಿನರ್ಜಿ ಮುಖ್ಯಸ್ಥ ಸಾಂಖೆ ಪ್ರಸಾದ್ ಇತರರು ಭಾಗವಹಿಸಿದ್ದರು.
ಕಳೆದ ವರ್ಷ 21 ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಗಿತ್ತು. ಈ ಸಲ 21 ಮಕ್ಕಳನ್ನು ಗುರುತಿಸಲಾಗಿದೆ. ಕಾರ್ಗಿಲ್ ಸಮರದ ನಂತರದ ಕಾರ್ಯಾಚರಣೆಗಳಲ್ಲಿ ಮಡಿದ ಯೋಧರ 8 ರಿಂದ 15 ವಯೋಮಾನದ ಮಕ್ಕಳಿಗೆಲ್ಲ ಶಿಕ್ಷಣ ಮುಂದುವರಿಸಲು ನೆರವಾಗುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಪ್ರತಿಷ್ಠಾನ ದ ಸಂಸ್ಥಾಪಕಿ, ನೃತ್ಯ ಕಲಾವಿದೆ ಸುಭಾಷಿಣಿ ವಸಂತ್ ವಿವರಿಸಿದರು. ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರ ರಕ್ಷಣೆ ಕರ್ತವ್ಯ ನಿರ್ವಹಿಸುವಾಗ ಹುತಾತ್ಮರಾದ ಪತಿ ಕರ್ನಲ್ ವಸಂತ್ ಅವರ ನೆನಪಿನಲ್ಲಿ ಸುಭಾಷಿಣಿ 2007ರಲ್ಲಿ ಈ ಪ್ರತಿಷ್ಠಾನ ಸ್ಥಾಪಿಸಿದ್ದಾರೆ. ಇದು ಹುತಾತ್ಮ ಯೋಧರ ಕುಟುಂಬಕ್ಕೆ ಆರ್ಥಿಕ, ಸಾಮಾಜಿಕ ಮತ್ತು ಕಾನೂನು ನೆರವು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ವಿವರಗಳಿಗೆಗೆ:www.vasantharatna.org, 2346 2063.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.