ADVERTISEMENT

ಶಂಖನಾದ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST
‘ಶಂಖನಾದ’ ಚಿತ್ರತಂಡ
‘ಶಂಖನಾದ’ ಚಿತ್ರತಂಡ   

ಒಂದು ಸಿನಿಮಾ ಯಶಸ್ವಿ ಆಗಿದೆ ಎಂದು ಗುರುತಿಸುವುದು ಹೇಗೆ? ಅದರ ಮಾನದಂಡಗಳೇನು? ನಟ ಸುದೀಪ್‌ ಅವರ ಪ್ರಕಾರ ಗೆಲುವಿನ ಮಾನದಂಡ ಹೀಗಿದೆ. ‘ಚಿತ್ರ ನೂರು ದಿನ ಪ್ರದರ್ಶನವಾದರೆ ಅದನ್ನು ಹಿಟ್‌ ಎಂದು ಹೇಳಲಾಗದು. ಆದರೆ ಜನರಿಗೆ ಮೆಚ್ಚುಗೆಯಾದರೆ ಅದು ನಿಜವಾದ ಯಶಸ್ಸು’.

ಸುದೀಪ್‌ ಹೀಗೆ ವ್ಯಾಖ್ಯಾನಕ್ಕಿಳಿದಿದ್ದು ’ಶಂಖನಾದ’ ಸಿನಿಮಾ ಸಿ.ಡಿ. ಬಿಡುಗಡೆ ಕಾರ್ಯಕ್ರಮದಲ್ಲಿ. ಹೊಸಬರ ಚಿತ್ರತಂಡಕ್ಕೆ ಶುಭ ಹಾರೈಸಿ ಬೆನ್ನುತಟ್ಟಲು ಆ ಕಾರ್ಯಕ್ರಮದಲ್ಲಿ ಸುದೀಪ್‌ ಹಾಜರಿದ್ದರು.  ‘ಈ ತಂಡದಲ್ಲಿ ಎಲ್ಲರಲ್ಲಿಯೂ ಮುಗ್ಧತೆ ಎದ್ದು ಕಾಣುತ್ತದೆ. ಅವರಿಗೆ ಯಶಸ್ಸು ಸಿಗಲಿ’ ಎಂದು ಹಾರೈಸಿದರು.

‘ಸಿನಿಮಾ ನಾಯಕನಾಗುವುದು ನನ್ನ ಹದಿಮೂರು ವರ್ಷಗಳ ಕನಸು. ನನ್ನ ಮೊದಲ ಸಿನಿಮಾ ಸಿ.ಡಿ. ಬಿಡುಗಡೆಗೆ ಸುದೀಪ್‌ ಬಂದಿರುವುದು ನಮ್ಮ ಅದೃಷ್ಟ’ ಎಂದು ಖುಷಿಯಿಂದ ಹೇಳಿಕೊಂಡರು ನಾಯಕ ಶಾಂತರೆಡ್ಡಿ ನಾಗಣ್ಣಗೌಡ ಪಾಟೀಲ್‌.

ADVERTISEMENT

‘ಒಳ್ಳೆಯದು ಮಾಡುವವರಿಗೆ ಒಳ್ಳೆಯದೇ ಆಗುತ್ತದೆ, ಕೆಟ್ಟದ್ದು ಮಾಡುವವರಿಗೆ ಕೆಟ್ಟದ್ದು ಆಗುತ್ತದೆ ಎಂಬುದು ಜನಪ್ರಿಯ ನಂಬಿಕೆ. ಆದರೆ ಅದು ತುಂಬ ಸಲ ಸತ್ಯವಾಗಿರುವುದಿಲ್ಲ. ಈ ಚಿತ್ರವೂ ಅಂಥದ್ದೇ ಕಥೆ ಹೊಂದಿದೆ. ಥ್ರಿಲ್ಲರ್‌, ಸಸ್ಪೆನ್ಸ್‌ ಕಥೆ ಇದು’ ಎಂದು ಅವರು ವಿವರಿಸಿದರು.  ‘ಈ ಚಿತ್ರದಲ್ಲಿ ನನ್ನ ಪಾತ್ರ ತುಂಬ ಚೆನ್ನಾಗಿದೆ. ನವರಸಗಳ ಅಭಿವ್ಯಕ್ತಿಗೂ ಅವಕಾಶ ಇರುವ ಪಾತ್ರ’ ಎಂದು ಹೇಳಿಕೊಂಡರು ನಾಯಕಿ ನಯನಾ.

ವಿಜಯರೆಡ್ಡಿ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ವಿನುಮನಸು ಸಂಗೀತ ನಿರ್ದೇಶನ ಮಾಡಿದ್ದಾರೆ. ನಕುಲ.ಡಿ.ದಂಡಿಕಲ್ ಛಾಯಾಗ್ರಹಣ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.