ADVERTISEMENT

ಸಸ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2011, 19:30 IST
Last Updated 18 ನವೆಂಬರ್ 2011, 19:30 IST
ಸಸ್ಯೋತ್ಸವ
ಸಸ್ಯೋತ್ಸವ   

ದಿ ಅಸೋಸಿಯೇಶನ್ ಆಫ್ ಪೀಪಲ್ ವಿತ್ ಡಿಸೆಬಲಿಟಿ ಸಂಸ್ಥೆ ವಿಕಲಾಂಗರಿಗೆ ಸ್ವ ಉದ್ಯೋಗ ತರಬೇತಿ ನೀಡಿ ಅವರು ಸ್ವಾವಲಂಬಿಗಳಾಗಲು ಶ್ರಮಿಸುತ್ತಿದೆ. ಅಲ್ಲಿನ ಮಕ್ಕಳು ತಾವೇ ತಮ್ಮ ಕೈಯಿಂದ ನೆಟ್ಟು, ಪ್ರೀತಿಯಿಂದ ಬೆಳೆಸಿ, ಪೋಷಿಸಿದ ವಿವಿಧ ಬಗೆಯ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ ಜೀವನ್‌ಬಿಮಾ ನಗರದಲ್ಲಿರುವ ಎಪಿಡಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ನಡೆಯುತ್ತಿದೆ.

ಇಲ್ಲಿ ವಿವಿಧ ಬಗೆಯ ಅಲಂಕಾರಿಕ ಸಸ್ಯಗಳು, ಮನೆಯ ಮುಂದಿರುವ ಉದ್ಯಾನದ ಅಂದವನ್ನು ಹೆಚ್ಚಿಸುವ ತರಹೇವಾರಿ ಗಿಡಗಳು, ಒಳಾಂಗಣ ಮತ್ತು ಹೊರಾಂಗಣದಲ್ಲಿ ಬೆಳೆಸಬಹುದಾದ ವೈವಿಧ್ಯಮಯ ಗಿಡಗಳು, ಆರ್ಕಿಡ್‌ಗಳು ಹಾಗೂ ಔಷಧೀಯ ಗುಣವುಳ್ಳ ಸಸ್ಯಗಳನ್ನು ಈ ಮಕ್ಕಳೇ ಬೆಳೆಸಿ ಮಾರಾಟಕ್ಕೆ ಇರಿಸಿದ್ದಾರೆ.

ತೋಟಗಾರಿಕೆ ಜತೆಗೆ ಅಡುಗೆ ತಯಾರಿಕೆಯನ್ನೂ ಕಲಿಯುತ್ತಿರುವ ಈ ಮಕ್ಕಳು ತಾವೇ ತಯಾರಿಸಿದ ಸ್ಯಾಂಡ್‌ವಿಚ್ ಹಾಗೂ ವಿವಿಧ ಸ್ವಾದದ ಜ್ಯೂಸ್‌ಗಳನ್ನು ಮಾರಾಟ ಮಾಡುವ ದೃಶ್ಯ ಮನಸೆಳೆಯುತ್ತದೆ. ಜತೆಗೆ ಕರಕುಶಲ ವಸ್ತುಗಳು, ಉದ್ಯಾನಕ್ಕೆ ಬೇಕಾದ ರಸಗೊಬ್ಬರ, ಬೀಜ ಮೊದಲಾದವುಗಳೆಲ್ಲವನ್ನು ಇಲ್ಲಿ ಪೂರೈಸುತ್ತಿದ್ದಾರೆ. ಇವರಿಗೂ ವ್ಯವಹಾರ ಜ್ಞಾನ ತಿಳಿಯಲಿ ಎಂಬುದು ಇದರ ಉದ್ದೇಶ.

`ಅಂಗವಿಕಲರು ಪೋಷಕರ ಮೇಲೆ ಅವಲಂಬಿತರು. ಆದರೆ, ಇತ್ತೀಚಿನ ದಿನಗಳಲ್ಲಿ ಪೋಷಕರೇ ಅಂಗವಿಕಲ ಮಕ್ಕಳ ಮೇಲೆ ಅವಲಂಬಿತರಾಗುತ್ತಿದ್ದಾರೆ~ ಎಂಬುದು ಎಡಿಪಿ ಸಂಸ್ಥಾಪಕಿ ಹೇಮಾ ಅವರ ಅಭಿಪ್ರಾಯ.

ಅಂದ ಹಾಗೇ ಈಕೆ ಕೂಡ ಅಂಗವಿಕಲರು. ತಾವು ಅನುಭವಿಸಿದ ನೋವುಗಳನ್ನು ಇತರೆ ಮಕ್ಕಳು ಅನುಭವಿಸಬಾರದು ಎಂಬ ಉದ್ದೇಶದಿಂದ ಈ ಸಂಸ್ಥೆ ಹುಟ್ಟುಹಾಕಿ ಅಂಗವಿಕಲ ಮಕ್ಕಳ ಬದುಕಿನಲ್ಲಿ ಬೆಳಕು ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸ್ಥಳ: ಎಪಿಡಿ, 9ನೇ ಬಿ ಮೇನ್ 10ನೇ ಕ್ರಾಸ್, ಎಲ್‌ಐಸಿ ಕಾಲೊನಿ, ಎಚ್‌ಎಎಲ್ 3ನೇ ಹಂತ, ಬೆಳಿಗ್ಗೆ 9.30ರಿಂದ ಸಂಜೆ 6. ಇದು ಭಾನುವಾರ ಕೊನೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.