ADVERTISEMENT

ಹೆಣ್ತನದ ತಿರುಳಿನ ನಾಟಕೋತ್ಸವ

ಹರವು ಸ್ಫೂರ್ತಿ
Published 14 ಜೂನ್ 2017, 19:30 IST
Last Updated 14 ಜೂನ್ 2017, 19:30 IST
ಕೆಂಪು ಕಣಗಿಲೆ ನಾಟಕದ ದೃಶ್ಯ
ಕೆಂಪು ಕಣಗಿಲೆ ನಾಟಕದ ದೃಶ್ಯ   

* ‘ಶ್ರೀಪಾದ ಭಟ್ ರಂಗ ಉತ್ಸವ’ದ ಉದ್ದೇಶ?
ಗ್ರಾಮೀಣ ಭಾಗದಲ್ಲಿ ರಂಗಭೂಮಿಗಾಗಿ ದುಡಿಯುತ್ತಿರುವ ರಂಗಕರ್ಮಿಗಳ ಕೆಲಸಕ್ಕೂ ಘನತೆ ಇದೆ ಎಂಬುದನ್ನು ನಗರದ ಜನತೆಗೆ ತೋರಿಸಿಕೊಡುವುದೇ ನಾಟಕೋತ್ಸವದ ಉದ್ದೇಶ.

* ಪ್ರದರ್ಶನಗೊಳ್ಳುತ್ತಿರುವ ನಾಟಕಗಳ ಬಗ್ಗೆ ಹೇಳಿ.
‘ಮಿಸ್ಟೇಕ್’, ‘ಕೆಂಪು ಕಣಗಿಲೆ’, ‘ಚಿತ್ರಾ’ ಈ ಮೂರೂ ನಾಟಕಗಳು ಸ್ತ್ರೀತ್ವವನ್ನು ಹೇಳುತ್ತವೆ. ಮಂಟೊನ ಕಥೆಯನ್ನಿಟ್ಟುಕೊಂಡು ಮಾಡಿದ ‘ಮಿಸ್ಟೇಕ್’ ನಾಟಕವು 1947ರ ಭಾರತ ವಿಭಜನೆ ಸಂದರ್ಭವನ್ನು ನೆಪವಾಗಿ ಇಟ್ಟುಕೊಂಡು ಹೆಣ್ಣಿನ ಮಾಯದ ಗಾಯದ ನೋವಿನ ಕುರಿತು ಮಾತಾಡಿದೆ. ಆ ಕಾಲ ಮತ್ತು ಸಂದರ್ಭದ ‘ಮಿಸ್ಟೇಕ್‌’ಗಳ ಮೊದಲ ಫಲ ಉಂಡಿರುವವಳು ಹೆಣ್ಣು. ಈ ನೋವಿನ ಕಥೆಗಳನ್ನು ಈ ನಾಟಕದ ಮೂಲಕ ಹೇಳ ಬಯಸಿದ್ದೇನೆ.

ಎರಡನೆಯದಾಗಿ ರವೀಂದ್ರನಾಥ್  ಠ್ಯಾಗೋರ್‌ ಅವರ ನಾಟಕ ಆಧರಿಸಿ ಬರೆದ ‘ಕೆಂಪು ಕಣಗಿಲೆ’. ಮಾರುಕಟ್ಟೆ ಹಾಗೂ ತಂತ್ರಜ್ಞಾನಕ್ಕೆ ಸ್ತ್ರೀತನದ ಸಂಪರ್ಕಬೇಕು, ಇಲ್ಲದಿದ್ದರೆ ಅದು ಮನುಷ್ಯತ್ವವನ್ನು ನಾಶಗೊಳಿಸುತ್ತದೆ ಎಂದು ಟ್ಯಾಗೋರ್‌ ಹೇಳುತ್ತಿದ್ದರು. ಈ ಆಶಯ ಇಟ್ಟುಕೊಂಡು ಬರೆದದ್ದು ‘ಕೆಂಪು ಕಣಗಿಲೆ’. ಪುರುಷನ ಅಹಂಕಾರವನ್ನು ಕಳಚುವುದಕ್ಕೆ ನೆರವಾಗುವ ಆಶಯದ ಚಿಂತನೆ ಇಲ್ಲಿದೆ.

ADVERTISEMENT

(ಶ್ರೀಪಾದ ಭಟ್‌)

‘ಚಿತ್ರಾ’ ನಾಟಕ ಕೂಡ ರವೀಂದ್ರನಾಥ್ ಟ್ಯಾಗೋರ್‌ ಅವರದ್ದು. ಅದನ್ನು ಈ ಕಾಲಕ್ಕೆ ಅನ್ವಯವಾಗುವಂತೆ ಮರುಓದಿಗೆ ಒಳಪಡಿಸಿ ಬರೆದಿದ್ದೇನೆ.
ಮೊದಲ ಬಾರಿ ಚಿತ್ರಾಂಗದೆಯನ್ನು ನೋಡಿದ ಅರ್ಜುನ ಆಕೆಯನ್ನು ನಿರಾಕರಿಸುತ್ತಾನೆ. ಇದಕ್ಕೆ ಚಿತ್ರಾಂಗದೆ ಮನ್ಮಥನಿಂದ ಸುಂದರಿಯಾಗುವಂತೆ ವರ ಪಡೆಯುತ್ತಾಳೆ. ಅರ್ಜುನನಿಗಾಗಿ ತನ್ನತನವನ್ನೇ ಕಳೆದುಕೊಂಡು ಸುಂದರಿಯಾದ ಚಿತ್ರಾಂಗದೆಗೆ ಅರ್ಜುನನ ಸ್ಪರ್ಶದಿಂದ ವಾಸ್ತವದ ಅರಿವಾಗುತ್ತದೆ. ‘ಅರ್ಜುನ ಪ್ರೀತಿಸುತ್ತಿರುವುದು ನನ್ನನಲ್ಲ, ಬಾಹ್ಯ ಸೌಂದರ್ಯವನ್ನು’ ಎಂದು ಅರಿತ ಚಿತ್ರಾಂಗದೆ ವರವನ್ನು ಹಿಂದಿರುಗಿಸುತ್ತಾಳೆ. 

ನಮ್ಮತನವನ್ನು ಕಳೆದುಕೊಂಡು ಮಾರುಕಟ್ಟೆಯ ಅಗತ್ಯಕ್ಕೆ ಮತ್ತು ಬೇರಯವರಿಗಾಗಿ ಆಕಾರ ಬದಲಿಸಿಕೊಳ್ಳುತ್ತಾ ಹೋಗುತ್ತೇವೆ. ಇದರ ಬಹಳ ದೊಡ್ಡ ದುರಂತ ಎಂದರೆ ನಮ್ಮೊಳಗಿನ ಮನುಷ್ಯತ್ವ ಕೂಡ ಬದಲಾಗುತ್ತಾ ಹೋಗುವುದು. ಇಂಥ ಬದಲಾವಣೆಯ ವಿರುದ್ಧ ‘ಚಿತ್ರ’ ನಾಟಕ ಮಾತನಾಡುತ್ತದೆ.

* ನಾಟಕೋತ್ಸವದಲ್ಲಿ ಭಾಗವಹಿಸುವ ತಂಡಗಳ ಬಗ್ಗೆ..
ಇಂದಿನ ಹಲವು ಯುವಕರಿಗೆ ಗ್ರಾಮೀಣ ಭಾಗದಲ್ಲಿ ರಂಗ ಚಟುವಟಿಕೆ ಮಾಡುವುದಕ್ಕೆ ಅಳುಕು. ನಗರದಲ್ಲಿ ಇದ್ದರೇ ಬೆಳೆಯಲು ಸಾಧ್ಯ ಎನ್ನುವಂತಾಗಿದೆ. ‘ರಥಬೀದಿ ಗೆಳೆಯರು’, ‘ನಟನಾ’, ‘ನೃತ್ಯ ನಿಕೇತನ’ ಇವು ಗ್ರಾಮೀಣ ಭಾಗದಲ್ಲಿ ದುಡಿಯುತ್ತಿರುವ ತಂಡಗಳು. ಇಂದು ನಗರಕ್ಕೆ ಬಂದು ಪ್ರದರ್ಶನ ನೀಡುತ್ತಿವೆ.

***

ಶ್ರೀಪಾದ ಭಟ್‌ ರಂಗೋತ್ಸವ
ಉದ್ಘಾಟನೆ–ಕವಿ ಜಯಂತ ಕಾಯ್ಕಿಣಿ, ಉಪಸ್ಥಿತಿ– ನಿವೃತ್ತ ನ್ಯಾಯಮೂರ್ತಿ ಎಚ್.ಎನ್ .ನಾಗಮೋಹನ ದಾಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್, ಲಹರಿ ಆಡಿಯೊ ಸಂಸ್ಥೆಯ ಲಹರಿ ವೇಲು, ರಂಗಕರ್ಮಿ ಮಂಡ್ಯ ರಮೇಶ್, ನಾಟಕಕಾರರಾದ ಸುಧಾ ಆಡುಕಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.