ಮುದ್ದುಮೊಗದ ಹುಬ್ಬಳ್ಳಿ ಬಾಲೆ ಶರ್ವರಿ ಗೊತ್ತಲ್ಲ; ಅದೇ ಡ್ರಾಮಾ ಜೂನಿಯರ್ಸ್ ಸೀಸನ್ 4ರಲ್ಲಿ ಮಿಂಚಿದ ಬಾಲ ಪ್ರತಿಭೆ ತನ್ನ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮನಗೆದ್ದವಳು. ಇದ್ದಕ್ಕಿದ್ದಂತೆ ಆ ವೇದಿಕೆಯಿಂದಲೇ ಮಾಯವಾದಳು. ಈಗ ಇದೆಲ್ಲ ಹಳೆ ಮಾತು ಬಿಡಿ. ಶರ್ವರಿ ಈಗೇನು ಮಾಡುತ್ತಿದ್ದಾಳೆ ಗೊತ್ತಾ? ಶಾಲೆಗಂತೂ ಹೋಗ್ತಿಲ್ಲ; ಆಕಿ ಸಿನಿಮಾ ಮಾಡ್ತಿದ್ದಾಳೆ.
ಹೌದು; ಕೃಷ್ಣರಾಜ್ ನಿರ್ದೇಶನದ ಲೂಸ್ಮಾದ ಯೋಗಿ, ಆಕಾಂಕ್ಷಾ ಅಭಿನಯದ ಲಂಬೋದರ ಕೇರ್ ಆಫ್ ಬಸವನಗುಡಿ ಬೆಂಗಳೂರು ಚಿತ್ರದಲ್ಲಿ ಶರ್ವರಿಗೂ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸುವ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದಾಳೆ. ಈ ಡ್ರಾಮಾ ಜ್ಯೂನಿಯರ್ ಪಯಣದ ನಂತರ ಈಕೆಗೆ ಸಾಕಷ್ಟು ಅವಕಾಶಗಳು ಅರಸಿ ಬಂದಿವೆ. ಚಿತ್ರಕಥೆಗೆ ಒತ್ತುಕೊಟ್ಟು ಒಪ್ಪಿಕೊಂಡ ಸಿನಿಮಾಗಳಲ್ಲಿ ಲಂಬೋದರ ಮೊದಲನೆಯದು. ಕಿರಿಕ್ ಪಾರ್ಟಿ ಖ್ಯಾತಿಯ ರಿಷಬ್ ಶೆಟ್ಟಿ ನಿರ್ದೇಶನದ ‘ಕಥಾ–ಸಂಗಮ’ದಲ್ಲೂ ಶರ್ವರಿಯ ಝಲಕ್ ಇದೆ. ಆಕಾಂಕ್ಷಾ ಎಂಬ ಕಿರುಚಿತ್ರದಲ್ಲೂ ಆಕಾಂಕ್ಷಾಳಾಗಿ ಮುಖ್ಯಭೂಮಿಕೆಯಲ್ಲಿದ್ದಾಳೆ. ಈಗಾಗಲೇ ಲಂಬೋದರ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಶರ್ವರಿ ಸಿನಿಮಾ ತಂಡದ ಮನ ಗೆದ್ದಿದ್ದಾಳೆ.
ಶರ್ವರಿಗೆ ನಟನೆಯ ಸಾಕಷ್ಟು ಅವಕಾಶಗಳು ಬರುತ್ತಿದ್ದು, ಚಿತ್ರದ ಕಥೆಗೆ ಮಹತ್ವ ನೀಡಿ ಆಕೆಯನ್ನು ನಟಿಸಲು ಕಳುಹಿಸಲಾಗುವುದು. ಸಾಮಾಜಿಕ ಚಿಂತನೆಯುಳ್ಳ, ಒಳ್ಳೆ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಪಾತ್ರ ದೊರೆತರೆ ಸಂತೋಷದಿಂದ ಒಪ್ಪಿಕೊಳ್ಳುತ್ತೇವೆ ಎನ್ನುತ್ತಾರೆ ಶರ್ವರಿಯ ಅಮ್ಮ ನಾಗವೇಣಿ ಹಾಗೂ ಅಪ್ಪ ವೀರಭದ್ರಪ್ಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.