ADVERTISEMENT

ಕೆಜಿಎಫ್‌ ಸಿನಿ ತಂಡದ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 14:53 IST
Last Updated 25 ಫೆಬ್ರುವರಿ 2019, 14:53 IST

ಕನ್ನಡದ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಸಿನಿಮೋತ್ಸವದ ಬಗ್ಗೆ ಗೌರವ ಇದ್ದಂತೆ ಕಾಣುತ್ತಿಲ್ಲ.

ಕಳೆದ ಸಾಲಿನ ಜನಪ್ರಿಯ ಚಲನಚಿತ್ರಗಳ ವರ್ಗದಲ್ಲಿ ‘ಕೆಜಿಎಫ್’ಗೆ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮೊದಲ ಸ್ಥಾನ ಸಿಕ್ಕಿರುವುದು ಸಹಜ ಹಾಗೂ ನ್ಯಾಯಸಮ್ಮತವೇ. ಈ ಚಿತ್ರದ ಯಶಸ್ಸಿನ ಕಾರಣಗಳನ್ನು ಚರ್ಚೆ ಮಾಡಲು ಭಾನುವಾರ ಮಧ್ಯಾಹ್ನ ಎರಡು ಗಂಟೆಗಳ ಕಾಲ ಕಾರ್ಯಕ್ರಮವೊಂದನ್ನು ಸಿನಿಮೋತ್ಸವ ಆಯೋಜಿಸಿತ್ತು.

ಈ ತರಹದ ಚರ್ಚೆ ಒಂದು ಅಂತರರಾಷ್ಟ್ರೀಯ ಉತ್ಸವದಲ್ಲಿ ನಡೆಯುವಾಗ ಭಾಗವಹಿಸಬೇಕಾದ್ದು ನಿರ್ಮಾಪಕ, ನಿರ್ದೇಶಕ ಮತ್ತು ಬರಹಗಾರರು. ಯಾವುದೇ ಚಿತ್ರದ ಕರ್ತೃಗಳು ಇವರೇ. ಆದರೆ ಈ ಚರ್ಚೆಗೆ ವಿಜಯ್ ಕಿರಗಂದೂರು ಆಗಲೀ, ಪ್ರಶಾಂತ್ ನೀಲ್ ಆಗಲಿ ಬರಲೇ ಇಲ್ಲ. ಛಾಯಾಗ್ರಾಹಕ, ಕಲಾ ನಿರ್ದೇಶಕ ಮತ್ತು ಖಳನಟನನ್ನು ಕಳಿಸಿ ಕೇವಲ ಸಾಂಕೇತಿಕ ಹಾಜರಾತಿ ದಾಖಲಿಸಿದರು.

ADVERTISEMENT

ಇಂತಹ ಉತ್ಸವಗಳಲ್ಲಿ ಚಿತ್ರದ ಮೇಕಿಂಗ್ ಜೊತೆಗೆ ಮಾರ್ಕೆಟಿಂಗ್, ಪ್ರೊಮೋಷನ್ ಇತ್ಯಾದಿಗಳ ಬಗ್ಗೆ ಆಸಕ್ತ ವಿದ್ಯಾರ್ಥಿಗಳು, ಉದ್ದಿಮೆದಾರರು ಬರುತ್ತಾರೆ ಎಂಬ ಪರಿವೆಯೂ ಕೆಜಿಎಫ್ ತಂಡಕ್ಕೆ ಇದ್ದಂತಿಲ್ಲ. ಭಾಗವಹಿಸಿದ ಛಾಯಾಗ್ರಾಹಕ ಕಲಾನಿರ್ದೇಶಕ ಮತ್ತು ನಟರು ತಾವು ಎಷ್ಟು ಎಂಜಾಯ್ ಮಾಡಿದೆವು, ತಮಗೆ ಚಾನ್ಸ್ ಕೊಟ್ಟ ನಿರ್ದೇಶಕ, ನಿರ್ಮಾಪಕ ಎಂತಹ ಮಹಾನ್ ವ್ಯಕ್ತಿ ಇತ್ಯಾದಿ ಮಾತುಗಳನ್ನು ಗಾಂಧಿನಗರದ ಹೋಟೆಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಂತೆ ಮಾತಾಡಿ ಹೊರಟರು.

ಕನ್ನಡವರು ನಡೆಸುವ `ಅಂತರರಾಷ್ಟ್ರೀಯ' ಚಲನಚಿತ್ರೋತ್ಸವದ ಬಗ್ಗೆ ಕನ್ನಡದ ನಿರ್ದೇಶಕ, ನಿರ್ಮಾಪಕರಿಗೇ ಗೌರವ ಇಲ್ಲದೇ ಹೋದರೆ ಈ ಎಲ್ಲ ಆಡಂಬರಕ್ಕೆ ಏನು ಅರ್ಥ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.