ADVERTISEMENT

ಅಪಘಾತ: 10 ಪಟ್ಟು ಪರಿಹಾರ

​ಪ್ರಜಾವಾಣಿ ವಾರ್ತೆ
Published 12 ಮೇ 2018, 19:30 IST
Last Updated 12 ಮೇ 2018, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ರಸ್ತೆ ಅಪಘಾತ ಸಂತ್ರಸ್ತರಿಗೆ ನೀಡಲಾಗುವ ಪರಿಹಾರ ಮೊತ್ತವನ್ನು ಕನಿಷ್ಠ ಹತ್ತು ಪಟ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಅಪಘಾತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರು, ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ಮತ್ತು ಗಾಯಾಳುಗಳಿಗೆ ನೀಡಲಾಗುವ ಪರಿಹಾರಕ್ಕೆ ಪರಿಷ್ಕೃತ ಪರಿಹಾರ ಮೊತ್ತ ಅನ್ವಯವಾಗಲಿದೆ.

ಅಪಘಾತಕ್ಕೀಡಾದವರಿಗೆ ಪರಿಹಾರ ನೀಡುವಾಗ ಪ್ರಮುಖವಾಗಿ ಪರಿಗಣಿಸಲಾಗುತ್ತಿದ್ದ ‘ವಯಸ್ಸು ಮತ್ತು ಆದಾಯ’ ಮಾನದಂಡವನ್ನು ಕೈಬಿಡಲು ನಿರ್ಧರಿಸಲಾಗಿದೆ.

ADVERTISEMENT

ಸದ್ಯ ಜಾರಿಯಲ್ಲಿರುವ ಮೋಟಾರು ವಾಹನ ಕಾಯ್ದೆ ನಿಯಮದಂತೆ ಅಪಘಾತಕ್ಕೀಡಾದ ವ್ಯಕ್ತಿಯ ವಯಸ್ಸು ಮತ್ತು ಆದಾಯವನ್ನು ಪರಿಗಣಿಸಿ ಪರಿಹಾರ ನೀಡಲಾಗುತ್ತಿದೆ.

ರಸ್ತೆ ಅಪಘಾತ ಸಂತ್ರಸ್ತರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸುಮಾರು 24 ವರ್ಷಗಳ ನಂತರ ಇಂಥದ್ದೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಸರ್ಕಾರ ಶೀಘ್ರವೇ ಅಧಿಸೂಚನೆ ಹೊರಡಿಸುವುದಾಗಿ ಪ್ರಕಟಿಸಿದೆ.

ಸರ್ಕಾರ ನಿಗದಿ ಮಾಡಿದ ಮೊತ್ತಕ್ಕಿಂತಲೂ ಹೆಚ್ಚು ಪರಿಹಾರ ಬಯಸುವ ಸಂತ್ರಸ್ತರು ಇಲ್ಲವೇ ಅವರ ಕುಟುಂಬ ಸದಸ್ಯರಿಗೆ, ವಾಹನ ಅಪಘಾತ ಪರಿಹಾರ ಇತ್ಯರ್ಥ ನ್ಯಾಯಮಂಡಳಿ ಮೊರೆ ಹೋಗಲು ಅವಕಾಶ ಕಲ್ಪಿಸಲಾಗಿದೆ.

ಪರಿಷ್ಕೃತ ಪರಿಹಾರ ಎಷ್ಟು?
* ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ₹5 ಲಕ್ಷ
* ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದ ಸಂತ್ರಸ್ತರಿಗೆ ₹50 ಸಾವಿರದಿಂದ ₹5 ಲಕ್ಷ (ಅಂಗವೈಕಲ್ಯದ ಪ್ರಮಾಣ ಆಧಾರಿಸಿ ನಿಗದಿ)
* ಪರಿಹಾರ ಮೊತ್ತದಲ್ಲಿ ಪ್ರತಿವರ್ಷ ಶೇ 5ರಷ್ಟು ಏರಿಕೆ
* ಸದ್ಯ ಜಾರಿಯಲ್ಲಿರುವ ಮೋಟಾರು ವಾಹನ ಕಾಯ್ದೆಯ ಪ್ರಕಾರ, ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹50 ಸಾವಿರ ಮತ್ತು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದವರಿಗೆ ₹25 ಸಾವಿರ ಪರಿಹಾರ
* ಪ್ರತಿವರ್ಷ ರಸ್ತೆ ಅಪಘಾತದಲ್ಲಿ 1.5 ಲಕ್ಷ ಮಂದಿ ಸಾವು, 5 ಲಕ್ಷ ಜನರಿಗೆ ಗಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.