ADVERTISEMENT

ಅಪರಾಧಿಗಳ ಕುಟುಂಬದ ಕಣ್ಣೀರು

ಮರಣದಂಡನೆಗೆ ಯುವತಿಯ ಪೋಷಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 19:59 IST
Last Updated 10 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ/ಐಎಎನ್‌ಎಸ್‌):  ‘ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಿದ ದಿನ  ನ್ಯಾಯ ಸಿಕ್ಕಿತೆಂದು ನಾವು ಭಾವಿಸುತ್ತೇವೆ. ಅಂದು ನಮಗೆ ಶಾಂತಿ ದೊರೆ­ಯುತ್ತದೆ... ಆ ರಾಕ್ಷಸರಿಗೆ ಜೀವಿಸುವ ಹಕ್ಕಿಲ್ಲ... ನನ್ನ ಮಗಳ ಕೊನೆಯ ಆಸೆ ಕೂಡ ಅದೇ ಆಗಿತ್ತು’ ಎಂದು ಯುವತಿಯ ತಾಯಿ ಹೇಳಿದರು. ಯುವತಿಯ ತಂದೆ ಮತ್ತು ಸೋದರ ಕೂಡ ಕೋರ್ಟ್‌ನಲ್ಲಿ ಹಾಜರಿದ್ದರು.

ಸ್ನೇಹಿತೆಯ ಮೇಲೆ ನಡೆದ ಬರ್ಬರ ಅತ್ಯಾಚಾರ­ವನ್ನು ಕಣ್ಣಾರೆ ಕಂಡ ಮತ್ತು ಆರೋಪಿಗಳಿಂದ ತೀವ್ರವಾಗಿ ಹಲ್ಲೆಗೆ ಒಳಗಾಗಿದ್ದ ಯುವತಿ ಸ್ನೇಹಿತ, ಸಾಫ್ಟ್‌ವೇರ್‌ ಉದ್ಯೋಗಿ, ‘ನಾನು ಉತ್ತಮ ಗೆಳತಿ­ಯನ್ನು ಕಳೆದುಕೊಂಡೆ. ತಪ್ಪಿತಸ್ಥ ಭಾವನೆ ಜೀವನ­ದುದ್ದಕ್ಕೂ ಕಾಡುತ್ತದೆ’ ಎಂದು ದುಃಖಿತರಾದರು.

ಒತ್ತಡದ ತೀರ್ಪು: ‘ಈ ತೀರ್ಪು ಒತ್ತಡದಿಂದ ಬಂದಿದೆ. ತಾವು ಮಾಡದ ತಪ್ಪಿಗೆ ನಾಲ್ವರು ಶಿಕ್ಷೆ ಅನುಭವಿ­ಸಬೇಕಿದೆ’ ಎಂದು ಆರೋಪಿಗಳ ಪರ ವಕೀಲ ಎ.ಪಿ. ಸಿಂಗ್‌  ಅಸಮಾಧಾನ ವ್ಯಕ್ತಪಡಿಸಿದರು.

‘ಈ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಮುಕೇಶ್‌ ಬಸ್‌ ಚಾಲನೆ ಮಾಡುತ್ತಿದ್ದ. ಅವನು ನೇರವಾಗಿ ಅಪರಾಧದಲ್ಲಿ ಭಾಗಿಯಾಗಿರಲಿಲ್ಲ’ ಎಂದು ಮುಕೇಶ್‌ ಪರ ವಕೀಲ ವಿ.ಕೆ. ಆನಂದ್‌ ಹೇಳಿದರು.

ಕಿಕ್ಕಿರಿದ ಕೋರ್ಟ್‌: ಕಿಕ್ಕಿರಿದು ತುಂಬಿದ್ದ ದೆಹಲಿಯ ಜಿಲ್ಲಾ ನ್ಯಾಯಾಲಯದ 304ನೇ ಕೊಠಡಿಯಲ್ಲಿ ಮಂಗಳವಾರ ನೀರವ ಮೌನ. ನಾಲ್ವರು ಆರೋಪಿ­ಗಳನ್ನು ನ್ಯಾಯಾಧೀಶ ಯೋಗೇಶ್‌ ಖನ್ನಾ ಅವರು ಅಪರಾಧಿಗಳು ಎಂದು ಮಧ್ಯಾಹ್ನ 12.30ರ ಹೊತ್ತಿಗೆ ಪ್ರಕಟಿಸುತ್ತಿದಂತೆ ಆರೋಪಿಗಳ   ಕುಟುಂಬದವರಲ್ಲಿ ಅನೇಕರು  ಅತ್ತೇ ಬಿಟ್ಟರು.

ಮುಕೇಶ್‌ನ ವೃದ್ಧ ತಾಯಿಗೆ ಕಣ್ಣೀರು ತಡೆಯಲು ಆಗಲಿಲ್ಲ. ತಂದೆ ಕುಚಿರ್ಗೆ ವರಗಿ ನಿಟ್ಟುಸಿರುಬಿಟ್ಟರು. ವಕೀಲರು ಅವರನ್ನು ನಿಧಾನವಾಗಿ ಕೋರ್ಟ್‌ನಿಂದ ಹೊರೆಗೆ ಕರೆದೊಯ್ದರು.

ಅಪರಾಧಿಗಳ ಪೋಷಕರನ್ನು ಕೆಲವು ಸುದ್ದಿಗಾರರು ಮಾತನಾಡಿಸಲು ಹೋದರು. ಆಗ ಪೋಷಕರು ಸಿಟ್ಟು ಮಾಡಿಕೊಂಡು ‘ನಿಮಗೇನು ಬೇಕು, ನಮ್ಮನ್ನು ನಮ್ಮ ಪಾಡಿಗೆ ಬಿಡಿ’ ಎಂದು ಗದರಿದರು.

ಮಾತಿನ ಚಕಮಕಿ: 40 ಜನರಷ್ಟೆ ಕೂರಬಹುದಾದ ಕೊಠಡಿಯಲ್ಲಿ ನೂರಾರು ಜನರು ಸೇರಿದ್ದರು. ಕೋರ್ಟ್‌ ಕೊಠಡಿಗೆ ಪ್ರವೇಶಿಸಲು ಅವಕಾಶ ನಿರಾ­ಕರಿಸಿದ ಕಾರಣ ಮಾಧ್ಯಮದವರು ಮತ್ತು ಪೊಲೀಸರ ಮಧ್ಯೆ ಕೆಲವು ಕಾಲ ಮಾತಿನ ಚಕಮಕಿ ನಡೆಯಿತು. ಈ ಬೆಳವಣಿಗೆಯ ನಂತರ ಹೆಚ್ಚುವರಿ ಪೊಲೀಸ್‌ ಪಡೆಯನ್ನು ಕರೆಸಲಾಯಿತು.

ಕೋರ್ಟ್‌ ಆವರಣದ ಹೊರಗೆ ಜಮಾಯಿಸಿದ್ದ ಸುಮಾರು 40 ಯುವಕರ ಗುಂಪೊಂದು ‘16 ಡಿಸೆಂಬರ್‌ ಕ್ರಾಂತಿ’ ಎಂಬ ‘ಫೇಸ್‌ಬುಕ್‌’ ಸಮೂಹ ತಮ್ಮದು ಎಂದು ಹೇಳಿಕೊಂಡು ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿತು.

‘ದೇವರನ್ನು ನಂಬಿದ್ದೇವೆ’ (ಔರಂಗಾಬಾದ್‌ ವರದಿ): ತೀರ್ಪಿನ ಸುದ್ದಿ ಕೇಳಿ ಅಪರಾಧಿ ಅಕ್ಷಯ್‌ ಠಾಕೂರ್‌ ಕುಟುಂಬದವರಿಗೆ ಕಣ್ಣೀರು ನಿಯಂತ್ರಿಸಲು ಆಗಲಿಲ್ಲ. ‘ಶಿಕ್ಷೆ ಪ್ರಕಟಿಸುವ ದಿನ ದೇವರು ನಮ್ಮ ಬಗ್ಗೆ ದಯೆತೋರುತ್ತಾನೆ’ ಎಂದರು.

ಔರಂಗಾಬಾದ್‌ನ ಲಹನ್‌ಕರ್ಮಾದಲ್ಲಿರುವ ಅಕ್ಷಯ್‌ ಠಾಕೂರ್‌ ಮನೆಯಲ್ಲಿ ಆತನ ತಂದೆ,  ಸರಯೂ ಸಿಂಗ್‌, ತಾಯಿ ಮಾಲತಿ ದೇವಿ, ಸೋದರರಾದ ಅಭಯ್‌ ಮತ್ತು ವಿನಯ್‌ ಇದ್ದರು. ಅಕ್ಷಯ್‌ನ ಪತ್ನಿ ಪುನಿತಾ ದೇವಿ ಕಂಕಳಲ್ಲಿ ಎರಡು ವರ್ಷದ ಗಂಡು ಮಗುವಿತ್ತು.
‘ನನ್ನ ಪತಿ ಅಂತಹ ಹೇಯ ಕೃತ್ಯವನ್ನು ಖಂಡಿತ ಎಸಗಿರುವುದಿಲ್ಲ ಎಂಬ ನಂಬಿಕೆ ನನಗಿದೆ’ ಎಂದು ಪುನಿತಾ ದೇವಿ ಹೇಳಿದರು.

ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಘಟನಾವಳಿ
ಡಿ.16, 2012: ಪ್ಯಾರಾಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಚಲಿಸುತ್ತಿದ್ದ  ಖಾಸಗಿ ಬಸ್‌ನಲ್ಲಿ ಆರು ಜನರಿಂದ ಸಾಮೂಹಿಕ ಅತ್ಯಾಚಾರ. ಯುವತಿ ಸ್ನೇಹಿತ ಸಾಫ್ಟ್‌ವೇರ್ ಎಂಜಿನಿಯರ್ ಮೇಲೆ ಹಲ್ಲೆ, ಘಟನೆ ನಂತರ ಇಬ್ಬರನ್ನು ಬಸ್‌ನಿಂದ ಹೊರದೂಡಿದ ಆರೋಪಿಗಳು. ಯುವತಿ, ಆಕೆಯ ಸ್ನೇಹಿತ ಸಫ್ದರ್‌ಜಂಗ್‌ ಆಸ್ಪತ್ರೆಗೆ ದಾಖಲು.

* ಡಿ.17: ದೇಶದಾದ್ಯಂತ ಘಟನೆ ಖಂಡನೆ, ವ್ಯಾಪಕ ಪ್ರತಿಭಟನೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯ.

* ಬಸ್‌ ಚಾಲಕ ರಾಮ್‌ ಸಿಂಗ್‌, ಆತನ ಸೋದರ ಮುಕೇಶ್‌, ವಿನಯ್‌ ಶರ್ಮಾ, ಪವನ್‌ ಗುಪ್ತಾ ಅವರನ್ನು ಆರೋಪಿಗಳೆಂದು ಗುರುತಿಸಿದ ದೆಹಲಿ ಪೊಲೀಸರು.

* ಡಿ.18, 2012: ರಾಮ್‌ಸಿಂಗ್ ಸೇರಿದಂತೆ ಮೂವರ ಬಂಧನ.

* ಡಿ. 20, 2012: ಯುವತಿಯ ಸ್ನೇಹಿತನ ವಿಚಾರಣೆ.

* ಡಿ.21, 2012: ದೆಹಲಿಯ ಆನಂದ ವಿಹಾರ ಬಸ್ ನಿಲ್ದಾಣದಲ್ಲಿ  ಬಾಲಾಪರಾಧಿ ಬಂಧನ. ಮುಕೇಶ್‌ನನ್ನು ಗುರುತಿಸಿದ ಯುವತಿಯ ಸ್ನೇಹಿತ. ಬಿಹಾರ ಹಾಗೂ ಹರಿಯಾಣಗಳಲ್ಲಿ ಪೊಲೀಸರಿಂದ ಆರನೇ ಆರೋಪಿ ಅಕ್ಷಯ್ ಠಾಕೂರ್‌ಗಾಗಿ ಶೋಧ.

* ಡಿ. 21/22, 2012: ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಆರೋಪಿ ಠಾಕೂರ್ ಬಂಧನ. ಉಪ ವಿಭಾಗೀಯ ಅಧಿಕಾರಿಯ ಮುಂದೆ ಆಸ್ಪತ್ರೆಯಲ್ಲಿ ಯುವತಿಯ ಹೇಳಿಕೆ ದಾಖಲು.

* ಡಿ.23, 2012: ನಿಷೇಧಾಜ್ಞೆ ಆದೇಶವನ್ನು ಧಿಕ್ಕರಿಸಿ ಬೀದಿಗಿಳಿದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹೋದ ದೆಹಲಿ ಪೋಲಿಸ್ ಪೇದೆ ಸುಭಾಷ್‌ ತೋಮರ್ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲು.

* ಡಿ.25, 2012: ಯುವತಿಯ ಸ್ಥಿತಿ ಗಂಭೀರ. ಹಲ್ಲೆಗೊಳಗಾದ ಪೊಲೀಸ್ ಪೇದೆ ಸಾವು.

* ಡಿ.26, 2012: ಹೃದಯಾಘಾತಕ್ಕೆ ಒಳಗಾದ ಯುವತಿಯನ್ನು ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಿದ ಸರ್ಕಾರ

* ಡಿ.29, 2012: ಯುವತಿಯ ಸಾವು. ಎಫ್‌ಐಆರ್‌ನಲ್ಲಿ ಕೊಲೆ ಆರೋಪ ದಾಖಲು.

* ಜ.2, 2013: ದೇಶದ ಮುಖ್ಯ ನ್ಯಾಯಾಧೀಶರಿಂದ ಲೈಂಗಿಕ ಪ್ರಕರಣಗಳ ಇತ್ಯರ್ಥಕ್ಕಾಗಿ ತ್ವರಿತ ನ್ಯಾಯಾಲಯ ಉದ್ಘಾಟನೆ.

* ಜ.3, 2013: ಐವರು ವಯಸ್ಕ ಆರೋಪಿಗಳ ವಿರುದ್ಧ ಕೊಲೆ, ಕೊಲೆ ಯತ್ನ, ಸಾಮೂಹಿಕ ಅತ್ಯಾಚಾರ, ಅಪಹರಣ, ಅಸ್ವಾಭಾವಿಕ
ಕಾನೂನುಬಾಹಿರ ಚಟುವಟಿಕೆ ಹಾಗೂ ಡಕಾಯಿತಿ ಪ್ರಕರಣ ದಾಖಲಿಸಿದ ಪೊಲೀಸರು.

* ಜ.7, 2013: ರಹಸ್ಯ ವಿಚಾರಣೆಗೆ ಕೋರ್ಟ್ ಆದೇಶ

* ಜ.17, 2013: ಐವರು ವಯಸ್ಕ ಆರೋಪಿಗಳ ವಿಚಾರಣೆ ಪ್ರಾರಂಭಿಸಿದ ತ್ವರಿತ ನ್ಯಾಯಾಲಯ

* ಜ.28, 2013: ಆರೋಪಿ ಬಾಲಕನ ಆರೋಪ ಸಾಬೀತಾಗಿದೆ ಎಂದ ಬಾಲ ನಾ್ಯಯ ಮಂಡಳಿ

* ಫೆ. 28:  ಬಾಲ ಆರೋಪಿ ವಿರುದ್ಧ ದೋಷಾರೋಪ ದಾಖಲು

* ಮಾ. 11: ತಿಹಾರ್‌ ಜೈಲಿನಲ್ಲಿ ರಾಮ್‌ಸಿಂಗ್‌ ಆತ್ಮಹತೆ್ಯ

* ಆ. 22: ನಾಲ್ವರು ಆರೋಪಿಗಳ ವಿರುದ್ಧದ ವಿಚಾರಣೆಯಲ್ಲಿ ಅಂತಿಮ ವಾದ ಆಲಿಸಿದ ತ್ವರಿತ ಗತಿ ನಾ್ಯಯಾಲಯ

* ಆ.31: ಬಾಲ ಆರೋಪಿಯನ್ನು ತಪ್ಪಿತಸ್ಥ ಎಂದು ಘೋಷಿಸಿ 3 ವರ್ಷ ಜೈಲು ಶಿಕ್ಷೆ ನೀಡಿದ ಬಾಲ ನಾ್ಯಯಮಂಡಳಿ

* ಸೆ. 3: ವಿಚಾರಣೆ ಮುಕ್ತಾಯಗೊಳಿಸಿ ತೀರ್ಪು ಕಾಯಿ್ದರಿಸಿದ ನಾ್ಯಯಾಲಯ

* ಸೆ. 10: ಮುಕೇಶ್‌, ವಿನಯ್‌, ಅಕ್ಷಯ್‌, ಪವನ್‌ ತಪ್ಪಿತಸ್ಥರು ಎಂದು ತೀರ್ಪು ನೀಡಿದ ನಾ್ಯಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.