ADVERTISEMENT

ಆತುರದಲ್ಲಿ ಮೊಕದ್ದಮೆಗೆ ಅನುಮತಿ: ಜೇಟ್ಲಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 19:30 IST
Last Updated 22 ಜನವರಿ 2011, 19:30 IST

ನವದೆಹಲಿ: ಯಡಿಯೂರಪ್ಪ ವಿರುದ್ಧ ಮೊಕದ್ದಮೆಗೆ ಆತುರದಲ್ಲಿ ಅನುಮತಿ ನೀಡುವ ಬದಲು ಭೂ ಹಗರಣಗಳ ವಿಚಾರಣೆ ಮುಗಿಯುವವರೆಗೂ  ರಾಜ್ಯಪಾಲರು ಕಾಯಬಹುದಿತ್ತು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಹೇಳಿದ್ದಾರೆ. ಯಡಿಯೂರಪ್ಪ ಅವರ ಮೇಲೆ ಮೊಕದ್ದಮೆ ಹೂಡಲು ಒಪ್ಪಿಗೆ ನೀಡಿರುವ ರಾಜ್ಯಪಾಲರ ಕ್ರಮ ಸಮರ್ಥಿಸಿರುವ ಗೃಹ ಸಚಿವ ಪಿ.ಚಿದಂಬರಂ ಹಾಗೂ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರ ಪ್ರತಿಪಾದನೆಯನ್ನು ಜೇಟ್ಲಿ ತಳ್ಳಿಹಾಕಿದ್ದಾರೆ.

ರಾಜ್ಯಪಾಲರು ಸ್ವಂತ ನಿರ್ಧಾರ ಕೈಗೊಳ್ಳುವ ಅಧಿಕಾರವಿದೆ ನಿಜ. ಆದರೆ, ಮುಖ್ಯಮಂತ್ರಿ ಅಥವಾ ಮಂತ್ರಿಗಳ ವಿರುದ್ಧ ಮೊಕದ್ದಮೆಗೆ ಒಪ್ಪಿಗೆ ನೀಡುವ ವಿಷಯವನ್ನು ಮಂತ್ರಿಮಂಡಲ ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದನ್ನು ಹೇಳಲು ಗೃಹ ಸಚಿವರು ಮರೆತಿದ್ದಾರೆ ಎಂದು ಜೇಟ್ಲಿ ವ್ಯಂಗ್ಯವಾಡಿದ್ದಾರೆ.

ರಾಜ್ಯಪಾಲರು ಮೊಕದ್ದಮೆಗೆ ಅನುಮತಿ ನೀಡುವ ಮೂಲಕ ಸಂವಿಧಾನತ್ಮಕವಾಗಿ ನಡೆದಿದ್ದಾರೆ ಎಂದು ಹೆಗ್ಡೆ ಮತ್ತು ಚಿದಂಬರಂ ಪ್ರತಿಪಾದಿಸಿದ್ದಾರೆ. ಆದರೆ ರಾಜ್ಯಪಾಲರು ಯಡಿಯೂರಪ್ಪ ಅವರ ವಿರುದ್ಧ ವಕೀಲರಿಬ್ಬರು  ಸಲ್ಲಿಸಿದ ದೂರನ್ನು ಮಂತ್ರಿ ಮಂಡಳಕ್ಕೆ ಕಳುಹಿಸಿಲ್ಲ. ಮಂತ್ರಿಮಂಡಲ ಮೊದಲು ಇದನ್ನು ಪರಿಶೀಲಿಸಬೇಕು. ದೂರಿನ ಸತ್ಯಾಸತ್ಯತೆ ಮೊದಲು ಅದಕ್ಕೆ ಮನವರಿಕೆ ಆಗಬೇಕು. ಇಲ್ಲದಿದ್ದರೆ ಅದು ಪೂರ್ವಗ್ರಹಪೀಡಿತ ನಿರ್ಧಾರವಾಗುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.