ಭೋಪಾಲ: ಕಳೆದ ತಿಂಗಳು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಆರ್ಎಸ್ಎಸ್ನ ಪ್ರಮುಖರು ಗೌರವ ಸಲ್ಲಿಸಿದರು. ಗುರುವಾರ ಇಲ್ಲಿ ಆರಂಭವಾದ ಸಂಘದ ವಾರ್ಷಿಕ ‘ದೀಪಾವಳಿ ಬೈಠಕ್’ನಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇಸ್ರೊದ ಮಾಜಿ ಅಧ್ಯಕ್ಷ ಯು.ಆರ್. ರಾವ್, ಗೌರಿ ಲಂಕೇಶ್ ಸೇರಿದಂತೆ ಅಗಲಿದ ಹಲವು ಗಣ್ಯರಿಗೆ ಗೌರವ ನಮನ ಸಲ್ಲಿಸಿದರು.
ಇತ್ತೀಚೆಗೆ ನಿಧನರಾದ ಖ್ಯಾತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೂ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ‘ಇತ್ತೀಚೆಗೆ ನಿಧನರಾದ ಅನೇಕ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಅದರಲ್ಲಿ ಗೌರಿ ಲಂಕೇಶ್ ಸಹ ಒಬ್ಬರು’ ಎಂದು ಆರ್ಎಸ್ಎಸ್ ಪ್ರಚಾರ ಪ್ರಮುಖ ಮನಮೋಹನ್ ವೈದ್ಯ ತಿಳಿಸಿದರು.
ಸೆಪ್ಟೆಂಬರ್ 5ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಆರ್ಎಸ್ಎಸ್ನ ಮೂರು ದಿನಗಳ ಬೈಠಕ್ನಲ್ಲಿ ರೋಹಿಂಗ್ಯಾ ವಲಸಿಗರ ಬಗ್ಗೆ, ದೇಶದ ಆರ್ಥಿಕ ಬೆಳವಣಿಗೆ, ಗೋರಕ್ಷಕರಿಂದ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.