ಮುಂಬೈ (ಪಿಟಿಐ): ತೀವ್ರ ಸಾರ್ವಜನಿಕ ಕುತೂಹಲ ಇಲ್ಲವೆ ಹಿತಾಸಕ್ತಿ ಒಳಗೊಳ್ಳದೇ ಇದ್ದಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ಅರ್ಜಿ ಸಲ್ಲಿಸಿದವರಿಗೆ ಯಾವುದೇ ವ್ಯಕ್ತಿ ತಮ್ಮ ಸೇವಾ ದಾಖಲೆ, ಆದಾಯ ತೆರಿಗೆ ಸಲ್ಲಿಕೆ, ವೈಯಕ್ತಿಕವಾಗಿ ಹೊಂದಿದ ಆಸ್ತಿಯ ವಿವರಗಳನ್ನು ನೀಡಬೇಕಿಲ್ಲ ಎಂದು ಬಾಂಬೆ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಅರ್ಜಿದಾರ ಸುಭಾಷ್ ಖೇಮ್ನಾರ್ ಅವರು ತಮ್ಮ ಆಸ್ತಿಪಾಸ್ತಿಯ ವಿವರಗಳನ್ನು ಪ್ರತಿವಾದಿ ದಿಲೀಪ್ ಥೋರಟ್ ಅವರಿಗೆ ನೀಡುವಂತೆ ಆದೇಶಿಸಿ ನಾಸಿಕ್ನ ರಾಜ್ಯ ಮಾಹಿತಿ ಆಯುಕ್ತರು ಹೊರಡಿಸಿದ ಆದೇಶವನ್ನು ರದ್ದುಗೊಳಿಸಿದ ನ್ಯಾಯಮೂರ್ತಿ ವಾಸಂತಿ ನಾಯಕ್ ಈ ತೀರ್ಪು ನೀಡಿದರು.
`ಅರ್ಜಿದಾರರ ವಾದ ಆಲಿಸಿ ಈ ಸಂಬಂಧದ ಕಾನೂನಿನಲ್ಲಿರುವ ಅಂಶಗಳನ್ನು ಪರಿಶೀಲನೆ ನಡೆಸಿದಾಗ, ಕಾನೂನಿನ ಸೆಕ್ಷನ್ 8(1)ಜೆ ಅನ್ವಯ ವ್ಯಕ್ತಿಯೊಬ್ಬ ಹೊಂದಿರುವ ಆಸ್ತಿಯು ಸಾರ್ವಜನಿಕ ಚಟುವಟಿಕೆ ಇಲ್ಲವೆ ಹಿತಾಸಕ್ತಿಗೆ ಸಂಬಂಧಿಸದೇ ಇದ್ದಲ್ಲಿ ಆ ಕುರಿತು ಮಾಹಿತಿ ಅಧಿಕಾರಿ ವಿವರಗಳನ್ನು ಒದಗಿಸುವ ಅಗತ್ಯ ಇಲ್ಲ' ಎಂದು ಕೋರ್ಟ್ ಹೇಳಿದೆ.
ತಮ್ಮ ಆಸ್ತಿಯ ವಿವರಗಳನ್ನು ಒದಗಿಸಲು ಆದೇಶಿಸಿ ಮುಖ್ಯ ಮಾಹಿತಿ ಅಧಿಕಾರಿ ಕಳೆದ ವರ್ಷದ ಡಿಸೆಂಬರ್ 4ರಂದು ಹೊರಡಿಸಿದ ಆದೇಶ ಪ್ರಶ್ನಿಸಿ ಅರ್ಜಿದಾರ ಖೇಮ್ನಾರ್ ಅವರು ಕೋರ್ಟ್ ಮೊರೆ ಹೋಗಿದ್ದರು. ಪ್ರತಿವಾದಿ ಸುಲಿಗೆಯಲ್ಲಿ ತೊಡಗಿದ್ದಾರೆ ಎಂದು ಅರ್ಜಿದಾರ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.