ADVERTISEMENT

ಇಟಲಿ ಸಿಬ್ಬಂದಿಗೆ ವಿಶೇಷ ವಿಮಾನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST

ಕೊಚ್ಚಿ (ಐಎಎನ್‌ಎಸ್): ಕಡಲ್ಗಳ್ಳರು ಎಂದು ಭಾವಿಸಿ ಇಬ್ಬರು ಮೀನುಗಾರರನ್ನು ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಇಟಲಿ ಹಡಗಿನ ಇಬ್ಬರು ಸಿಬ್ಬಂದಿಗೆ ಕ್ರಿಸ್‌ಮಸ್ ಆಚರಿಸಲು ತವರಿಗೆ ತೆರಳಲು ಶುಕ್ರವಾರ ವಿಶೇಷ ವಿಮಾನವನ್ನು ಅಲ್ಲಿನ ಸರ್ಕಾರ ಕಳುಹಿಸಿಕೊಟ್ಟಿದೆ.

ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡ ವಿಶೇಷ ವಿಮಾನದಲ್ಲಿ ಇಲ್ಲಿಗೆ ಈಗಾಗಲೇ ಬಂದಿದೆ.  ಸ್ವದೇಶಕ್ಕೆ ತೆರಳಲು ಅನುಮತಿ ನೀಡಿರುವ ಕೇರಳ ಹೈಕೋರ್ಟ್ ಮತ್ತು ಕೇಂದ್ರ ಸರ್ಕಾರಕ್ಕೆ ಇಟಲಿ ಅಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಹೈಕೋರ್ಟ್ ಅನುಮತಿ: ಇಟಲಿ ಹಡಗಿನ ಇಬ್ಬರು ಸಿಬ್ಬಂದಿಗೆ ಕ್ರಿಸ್‌ಮಸ್ ಆಚರಿಸಲು ತವರಿಗೆ ತೆರಳಲು ಕೇರಳ ಹೈಕೋರ್ಟ್ ಗುರುವಾರ ಅನುಮತಿ ನೀಡಿತ್ತು.

ಅನುಮತಿಯ ಜತೆಗೆ ಸ್ವದೇಶಕ್ಕೆ ತೆರಳುತ್ತಿರುವ ಅವರಿಗೆ ಹೈಕೋರ್ಟ್ ಕೆಲವು ಷರತ್ತುಗಳು ವಿಧಿಸಿದೆ. ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯ. ಜನವರಿ ಹತ್ತರ ಮಧ್ಯಾಹ್ನ ಮೂರು ಗಂಟೆ ಒಳಗೆ ಭಾರತಕ್ಕೆ ಮರಳಿ ಬರಬೇಕು ಹಾಗೂ ಆರು ಕೋಟಿ ರೂಪಾಯಿ ಬ್ಯಾಂಕ್ ಖಾತರಿ ನೀಡಬೇಕು ಎಂದು ಆದೇಶಿಸಿದೆ

ಇಬ್ಬರನ್ನೂ ಭಾರತಕ್ಕೆ ವಾಪಸ್ ಕಳುಹಿಸುತ್ತೇವೆ ಎಂದು ಇಟಲಿ ಸರ್ಕಾರ ಭರವಸೆಯನ್ನು ನೀಡಬೇಕು ಎಂದು ಹೈಕೋರ್ಟ್ ಹೇಳಿದೆ. ಹಡಗಿನ ಸಿಬ್ಬಂದಿಗೆ ಸ್ವದೇಶಕ್ಕೆ ಹೋಗಲು ಅನುಮತಿ ನೀಡಲು ಕೇರಳ ಸರ್ಕಾರ ತೀವ್ರವಾದ ವಿರೋಧ ವ್ಯಕ್ತಪಡಿಸಿತ್ತು. ಒಂದು ಬಾರಿ ಇಟಲಿಗೆ ಹೋದರೆ ಮತ್ತೆ ವಾಪಸ್ ಆಗುವ ಸಾಧ್ಯತೆ ಕಡಿಮೆ ಎಂದು ರಾಜ್ಯ ಸರ್ಕಾರದ ಪರ ವಕೀಲರು ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.