ಚೆನ್ನೈ (ಪಿಟಿಐ): ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ (ಎಫ್ಡಿಐ) ಹೂಡಿಕೆ ಅವಕಾಶ ಮಾಡಿಕೊಟ್ಟಿರುವ ಕೇಂದ್ರ ಸರ್ಕಾರದ ನಿರ್ಧಾರ ಉತ್ತಮವಾಗಿದ್ದು, ಇದರಿಂದ ಉತ್ಪಾದನಾ ಸಾಮರ್ಥ್ಯ ಹೆಚ್ಚುವುದರ ಜತೆಗೆ ಆಹಾರ ಉತ್ಪನ್ನಗಳ ಬೆಲೆ ಏರಿಕೆ ತಗ್ಗಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಆಹಾರ ವಿತರಣಾ ಜಾಲ ನಿರ್ಮಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಉಪ ಗವರ್ನರ್ ಸಬೀರ್ ಗೋಕರ್ಣ್ ಬುಧವಾರ ಹೇಳಿದರು.
ದಕ್ಷಿಣ ಭಾರತ ವಾಣಿಜ್ಯೋಧ್ಯಮ ಸಂಸ್ಥೆಯ 102ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸಬೀರ್ ಅವರು `ಆಹಾರ ಉತ್ಪನ್ನಗಳ ಬೆಲೆ ಏರಿಕೆ ಸಮಸ್ಯೆಗೆ ಉತ್ಪಾದನೆಯನ್ನು ವೃದ್ಧಿಗೊಳಿಸಿ ಜನರು ಹೆಚ್ಚು ಬಳಸುವಂತೆ ಮಾಡುವುದೇ ಅಂತೀಮ ಪರಿಹಾರವಾಗಿದೆ. ಎಫ್ಡಿಐನಿಂದ ಚಿಲ್ಲರೆ ಮಾರುಕಟ್ಟೆಗಾಗುವ ಅನುಕೂಲ ಹಾಗೂ ಅನಾನುಕೂಲ ಕುರಿತಂತೆ ನೀವು ಚರ್ಚಿಸಿರಬಹುದು, ಆದರೆ ಮೂಲ ಸಮಸ್ಯೆಯತ್ತ ದೃಷ್ಟಿ ಹರಿಸಬೇಕಾಗಿದೆ. ನಮಗಿಂದು ಆಹಾರ ಧಾನ್ಯ ಉತ್ಪಾದನೆ ಹೆಚ್ಚಿಸುವ ಹಾಗೂ ಅದನ್ನು ಸಮರ್ಥವಾಗಿ ಹಂಚಿಕೆ ಮಾಡುವ ಅಗತ್ಯವಿದೆ~ ಎಂದು ಹೇಳಿದರು.
ದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಕುಸಿದಿದೆ ಹಾಗೂ ಅವುಗಳ ಹಂಚಿಕೆ ಕೂಡ ಅಸಮರ್ಪಕವಾಗಿದೆ. ಆದ್ದರಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ತೊಡಗಿಸುವುದರಿಂದ ಆಹಾರ ಧಾನ್ಯ ಉತ್ಪಾದನೆ ಮತ್ತು ಹಂಚಿಕೆ ವ್ಯವಸ್ಥೆ ಸುಧಾರಿಸುತ್ತದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.