ನವದೆಹಲಿ, (ಪಿಟಿಐ): ಕಳೆದ 1997ರಲ್ಲಿ ಇಲ್ಲಿನ ಉಪಹಾರ ಚಿತ್ರಮಂದಿರದಲ್ಲಿ ನಡೆದ ಬೆಂಕಿ ದುರಂತದಿಂದ ಸಂತ್ರಸ್ತರಾದವರಿಗೆ ದೆಹಲಿ ಹೈಕೋರ್ಟ್ ನಿಗದಿ ಪಡಿಸಿದ್ದ ಪರಿಹಾರ ಧನ ಮತ್ತು ಸಿನಿಮಾ ಮಂದಿರದ ಮಾಲಿಕರ ಮೇಲಿನ ಹಾನಿಯ ದಂಡದ ಪ್ರಮಾಣವನ್ನು ಗಣನೀಯವಾಗಿ ಕಡಿತಗೊಳಿಸಿ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಆರ್.ವಿ.ರವೀಂದ್ರನ್ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ, 20 ವರ್ಷಕ್ಕಿಂತ ಅಧಿಕ ವಯಸ್ಸಿನ ಮೃತರ ಕುಟಂಬಗಳ ಪರಿಹಾರ ಧನವನ್ನು 18 ಲಕ್ಷದಿಂದ 10 ಲಕ್ಷಕ್ಕೆ ಮತ್ತು 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮೃತರ ಕುಟುಂಬಗಳ ಪರಿಹಾರ ಧನವನ್ನು 15 ಲಕ್ಷದಿಂದ 7.5 ಲಕ್ಷ ರೂಗಳಿಗೆ ಇಳಿಸಿ ತೀರ್ಪು ನೀಡಿದೆ.
ಇದಲ್ಲದೇ, ಈ ಪೀಠವು ತನ್ನ ತೀರ್ಪಿನಲ್ಲಿ ಉಪಹಾರ ಚಿತ್ರಮಂದಿರದ ಮಾಲಿಕ ಸೋದರರಾದ ಗೋಪಾಲ್ ಮತ್ತು ಸುಶೀಲ್ ಅನ್ಸಾಲ್ ಅವರು ಕೊಡಬೇಕಿದ್ದ ಹಾನಿಯ ದಂಡದ ಪ್ರಮಾಣವನ್ನು 2.5 ಕೋಟಿಯಿಂದ 25 ಲಕ್ಷ ರೂಗಳಿಗೆ ಇಳಿಸಿದೆ. ಆದರೆ ಗಾಯಗೊಂಡವರಿಗೆ ಹೈ ಕೋರ್ಟ್ ನಿಗದಿ ಪರಿಸಿದ್ದ 1 ಲಕ್ಷ ರೂ ಪರಿಹಾರದ ತೀರ್ಮಾನವನ್ನು ಪುರಸ್ಕರಿಸಿದೆ.
ದಂಡದ ಪ್ರಮಾಣದ ಶೇಕಡಾ 85 ರಷ್ಟನ್ನು ಅನ್ಸಾಲ್ ಸೋದರರು ಭರಿಸಬೇಕು, ಉಳಿದ ದಂಡದ ಪ್ರಮಾಣವನ್ನು ಅಂದಿನ ದೆಹಲಿ ವಿದ್ಯುತ್ ಮಂಡಳಿ ಭರಿಸಬೇಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.
1997ರ ಜೂನ್ 13 ರಂದು ಉಪಹಾರ ಚಿತ್ರಮಂದಿರದಲ್ಲಿ ಬಾರ್ಡರ್ ಚಲನಚಿತ್ರದ ಪ್ರದರ್ಶನ ನಡೆಯುತ್ತಿದ್ದಾಗ ಉಂಟಾದ ಬೆಂಕಿ ದುರಂತದಲ್ಲಿ 59 ಮಂದಿ ಮೃತಪಟ್ಟಿದ್ದರು, ಜೊತೆಗೆ 103 ಮಂದಿ ಗಾಯಗೊಂಡಿದ್ದರು. 2003ರ ಏಪ್ರಿಲ್ 24 ರಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಒಟ್ಟು 18.5 ಕೋಟಿ ರೂ ಪರಿಹಾರ ನೀಡುವಂತೆ ತಿಳಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.