ಹೈದರಾಬಾದ್: ತೆಲಂಗಾಣದ ಭದ್ರಾದ್ರಿ ಕೊಠಗುಂಡೆಮ್ ಜಿಲ್ಲೆಯ ತೆಕುಲಪಲ್ಲಿಯಲ್ಲಿ ಭದ್ರತಾ ಪಡೆ ಗುರುವಾರ ಎನ್ಕೌಂಟರ್ ನಡೆಸಿ ಎಂಟು ನಕ್ಸಲರನ್ನು ಹತ್ಯೆ ಮಾಡಿದೆ. ಬುಧವಾರ ರಾತ್ರಿ ಆರಂಭಗೊಂಡ ಕಾರ್ಯಾಚರಣೆ ಗುರುವಾರ ಬೆಳಿಗ್ಗೆ 6.30ರ ಹೊತ್ತಿಗೆ ಕೊನೆಗೊಂಡಿತು.
ಈ ಪ್ರದೇಶದಲ್ಲಿ ಕನಿಷ್ಠ 17 ನಕ್ಸಲರ ಚಲನವಲನ ಇರುವುದು ಪೊಲೀಸರಿಗೆ ಮಾಹಿತಿ ಇತ್ತು. ಅವರನ್ನು ಸೆರೆಹಿಡಿಯಲೆಂದು ಆರಂಭಗೊಂಡ ಕಾರ್ಯಾಚರಣೆ ಎನ್ಕೌಂಟರ್ ಆಗಿ ಮಾರ್ಪಟಿತು. ಎಂಟು ಜನರನ್ನು ಹತ್ಯೆಗೈದ ಬಳಿಕ, ಉಳಿದವರು ಪರಾರಿಯಾದರು. ಈ ಕಾರ್ಯಾಚರಣೆಯಲ್ಲಿ ನಕ್ಸಲ್ ನಿಗ್ರಹ ತಂಡ(ಗ್ರೇಹೌಂಡ್ಸ್) ಭಾಗವಹಿಸಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಂದ್ರಪುಲ್ಲ ರೆಡ್ಡಿ ಪೊರು ಬಟ ಗುಂಪಿಗೆ ಸೇರಿದ ಈ ಮಾವೋವಾದಿಗಳ ಮೇಲೆ ಕೊಲೆ, ಸುಲಿಗೆ ಮತ್ತು ಬೆದರಿಕೆ ಪ್ರಕರಣಗಳು ದಾಖಲಾಗಿದ್ದವು. ಮೃತರಲ್ಲಿ ಈಶಂ ನರೇಶ್, ಎಂ.ಸಮೈಹ, ಸಂಜೀವ್, ನರಸಿಂಹ ಮತ್ತು ಅಮರ್ ಎಂಬ ಐವರನ್ನು ಗುರುತಿಸಲಾಗಿದೆ. ಈ ಮೊದಲು ಇವರು ಆಂಧ್ರ–ಒಡಿಸ್ಸಾ ಗಡಿಯಲ್ಲಿ ಸಕ್ರಿಯರಾಗಿದ್ದರು. ಇತ್ತೀಚೆಗೆ ಇವರ ಚಟುವಟಿಕೆಗಳು ಖಮ್ಮಂ–ವಾರಂಗಲ್ ಜಿಲ್ಲೆಗಳಿಗೂ ವಿಸ್ತರಿಸಿದ್ದವು ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.