ADVERTISEMENT

ಎನ್‌ಆರ್‌ಎಚ್‌ಎಂ ಹಗರಣ ಆರೋಪಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST

ಲಖನೌ (ಪಿಟಿಐ): ಉತ್ತರ ಪ್ರದೇಶದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯ (ಎನ್‌ಆರ್‌ಎಚ್‌ಎಂ) ಬಹುಕೋಟಿ ರೂಪಾಯಿ ಹಗರಣದ ಪ್ರಮುಖ ಆರೋಪಿ ಸುನಿಲ್ ವರ್ಮ, ಸೋಮವಾರ ತಮ್ಮ ನಿವಾಸದಲ್ಲಿ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ನಾಲ್ಕನೇ ನಿಗೂಢ ಸಾವು ಇದಾಗಿದೆ.

52 ವರ್ಷದ ವರ್ಮ ಅವರ ವಿಕಾಸ ನಗರದ ನಿವಾಸದಲ್ಲಿ ಬೆಳಿಗ್ಗೆ 8.30ರ ಸುಮಾರಿಗೆ ಈ ಘಟನೆ ನಡೆದಿದೆ. ವರ್ಮ ಎನ್‌ಆರ್‌ಎಚ್‌ಎಂ ಯೋಜನಾ ವ್ಯವಸ್ಥಾಪಕರಾಗಿದ್ದರು. ಈ ಹಗರಣದಲ್ಲಿ ಸಲ್ಲಿಸಲಾದ ಮೊದಲ ಎಫ್‌ಐಆರ್‌ನಲ್ಲಿ ಅವರನ್ನು ಹೆಸರಿಸಲಾಗಿತ್ತು. ಇದೇ ತಿಂಗಳ 4ರಂದು ಅವರ ಮನೆಯಲ್ಲಿ ಶೋಧ ನಡೆಸಲಾಗಿತ್ತು ಎಂದು ಸಿಬಿಐ ಮೂಲಗಳು ತಿಳಿಸಿವೆ. ಆದರೆ ವರ್ಮ ಅವರನ್ನು ವಿಚಾರಣೆಗೆ ಒಳಪಡಿಸಿರಲಿಲ್ಲ. ಅಲ್ಲದೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚನೆ ನೀಡಿರಲಿಲ್ಲ ಎಂದೂ ಅವು ಸ್ಪಷ್ಟಪಡಿಸಿವೆ.

ಮನೆಯಲ್ಲಿ ಸಿಬಿಐ ಶೋಧ ನಡೆಸಿದ ಬಳಿಕ ವರ್ಮ ಮಾನಸಿಕವಾಗಿ ಕುಗ್ಗಿಹೋಗಿದ್ದರು, ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಅವರ ಕುಟುಂಬದ ಮೂಲಗಳು ಹೇಳಿವೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ವೈದ್ಯಾಧಿಕಾರಿಗಳು ಸಾವಿಗೀಡಾಗಿದ್ದು, ಉಪ ವೈದ್ಯಾಧಿಕಾರಿಯೊಬ್ಬರ ಹತ್ಯೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.