ADVERTISEMENT

ಎನ್‌ಆರ್‌ಎಚ್‌ಎಂ ಹಗರಣ: ನಿವೃತ್ತ ಅಧಿಕಾರಿ ಬಂಧನ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST

ನವದೆಹಲಿ (ಪಿಟಿಐ): ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (ಎನ್‌ಆರ್‌ಎಚ್‌ಎಂ) ಯೋಜನೆಯಡಿ ನೀಡಲಾಗಿದ್ದ ಅನುದಾನ ದುರ್ಬಳಕೆ ಆರೋಪದ ಮೇರೆಗೆ ಉತ್ತರ ಪ್ರದೇಶದ ನಿರ್ಮಾಣ ಮತ್ತು ವಿನ್ಯಾಸ ಸೇವಾ ಸಂಸ್ಥೆಯ ನಿವೃತ್ತ ಪ್ರಧಾನ ವ್ಯವಸ್ಥಾಪಕ ಪಿ.ಕೆ.ಜೈನ್ ಅವರನ್ನು ಸಿಬಿಐ ಗುರುವಾರ ಬಂಧಿಸಿದೆ.

134 ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯದಲ್ಲಿ 5.46 ಕೋಟಿ ರೂಪಾಯಿ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಇತ್ತೀಚೆಗೆ ಜೈನ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

134 ಜಿಲ್ಲಾ ಆಸ್ಪತ್ರೆಗಳಲ್ಲಿ ನಿರ್ಮಾಣ ಮತ್ತು ವಿನ್ಯಾಸ ಕಾರ್ಯಕ್ಕಾಗಿ ಉತ್ತರ ಪ್ರದೇಶದ ಜಲ ನಿಗಮ ಘಟಕವು 13.4 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಆದರೆ, ಘಾಜಿಯಾಬಾದ್ ಮೂಲದ ಕಂಪೆನಿಯೊಂದು ತಯಾರಿಸಿದ ಸುಳ್ಳು ದಾಖಲೆಗಳಿಂದ ಕೆಲಸ ಮಾಡಿರುವುದಾಗಿ ತೋರಿಸಲಾಗಿದೆ.
 
ಜಿಲ್ಲಾ ಆಸ್ಪತ್ರೆಗಳಲ್ಲಿ ಅಳವಡಿಸಲಾಗಿರುವ ವಸ್ತುಗಳು ಕಳಪೆ ಮತ್ತು ತೀರ ಕೆಳದರ್ಜೆಯವಾಗಿದ್ದು, ಇದರಿಂದ ಖಜಾನೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಸಿಬಿಐ ಆರೋಪಿಸಿದೆ.

ಬುಧವಾರ ಜೈನ್ ಅವರ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 3 ಕೋಟಿ ರೂಪಾಯಿ ಮೌಲ್ಯದ ಚಿನ್ನ, 1.10 ಕೋಟಿ ರೂಪಾಯಿ ನಗದು ಮತ್ತು ಮಹತ್ವದ ದಾಖಲೆ ಪತ್ರಗಳನ್ನು ಸಿಬಿಐ ವಶಪಡಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.