ಲಖನೌ: ಸಾಮಾಜಿಕ ಸ್ಥಾನಮಾನಗಳು ಏನೇ ಇದ್ದರೂ ಎಲ್ಲ ಹಿಂದೂಗಳು ಸೋದರರಿದ್ದಂತೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ಮೀರತ್ನಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಆರ್ಎಸ್ಎಸ್ ಕಾರ್ಯಕರ್ತರ ಶಿಬಿರದಲ್ಲಿ ಭಾನುವಾರ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇದ್ದು, ದೇಶದ ವಿವಿಧೆಡೆ ದಲಿತರ ಮೇಲಿನ ದೌರ್ಜನ್ಯ ಮತ್ತು ದಾಳಿ ಪ್ರಕರಣಗಳು ನಡೆಯುತ್ತಿರುವ ಸಂದರ್ಭದಲ್ಲಿ ಭಾಗವತ್ ಈ ರೀತಿ ಹೇಳಿದ್ದಾರೆ. ಇದು ದಲಿತರನ್ನು ಓಲೈಸುವ ಪ್ರಯತ್ನ ಎಂದು ವಿಶ್ಲೇಷಿಸಲಾಗಿದೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ದಲಿತ ಸಂತರು ಮತ್ತು ದಲಿತ ಸಮುದಾಯದ ಪ್ರಮುಖರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವೇದಿಕೆಯಲ್ಲಿ ಸಂತ ರವಿದಾಸ್, ವಾಲ್ಮೀಕಿ ಮತ್ತು ಗೌತಮ ಬುದ್ಧ ಅವರ ಭಾವಚಿತ್ರಗಳನ್ನು ಹಾಕಲಾಗಿತ್ತು.
‘ಪ್ರತಿಯೊಬ್ಬ ಹಿಂದೂವನ್ನು, ಅವನು ಯಾವುದೇ ಜಾತಿಗೆ ಸೇರಿದ್ದರೂ ಅವನು ನಮ್ಮ ಸೋದರ. ತಾನು ಯಾವುದೇ ಧರ್ಮಕ್ಕೆ ಸೇರಿದ್ದರೂ, ಭಾರತವನ್ನು ತನ್ನ ತಾಯಿ ಎಂದು ಗೌರವಿಸುತ್ತಾನೊ ಅವನು ಭಾರತೀಯ’ ಎಂದು ಅವರು ಹೇಳಿದ್ದಾರೆ.
ಹಿಂದೂ ತೀವ್ರವಾದದ ಬಗೆಗಿನ ಚರ್ಚೆಯನ್ನು ಮುಗಿಸಬೇಕು. ಏಕೆಂದರೆ ತೀವ್ರವಾದವು ಉದಾರವಾದ ಮತ್ತು ಅಹಿಂಸೆಯನ್ನು ಬಿಂಬಿಸುತ್ತದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.