ADVERTISEMENT

ಏರ್‌ಸೆಲ್–ಮ್ಯಾಕ್ಸಿಸ್‌ ಹಗರಣ: ವಿಚಾರಣೆಗೆ ಚಿದಂಬರಂ ಹಾಜರು

ಪಿಟಿಐ
Published 5 ಜೂನ್ 2018, 19:30 IST
Last Updated 5 ಜೂನ್ 2018, 19:30 IST
ಪಿ.ಚಿದಂಬರಂ
ಪಿ.ಚಿದಂಬರಂ   

ನವದೆಹಲಿ : ಏರ್‌ಸೆಲ್‌–ಮ್ಯಾಕ್ಸಿಸ್‌ ಹಗರಣದಲ್ಲಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ.ಚಿದಂಬರಂ ಅವರು ಮಂಗಳವಾರ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾದರು.

ಅಧಿಕಾರಿಗಳು ಎರಡು ಗಂಟೆಗೂ ಹೆಚ್ಚು ಸಮಯ ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಿದರು. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್‌ ಮುಖಂಡರೊಬ್ಬರು ವಿಚಾರಣೆಗೆ ಜಾರಿ ನಿರ್ದೇಶನಾಯದ ಮುಂದೆ ಹಾಜರಾಗಿದ್ದು ಇದೇ ಮೊದಲು.

ವಿಸ್ತರಣೆ: ಏರ್‌ಸೆಲ್‌–ಮ್ಯಾಕ್ಸಿಸ್‌ ಪ್ರಕರಣದಲ್ಲಿ ಚಿದಂಬರಂ ಅವರ ಬಂಧನಕ್ಕೆ ನೀಡಿದ್ದ ಮಧ್ಯಂತರ ತಡೆಯನ್ನು ದೆಹಲಿ ಹೈಕೋರ್ಟ್‌ ಜುಲೈ 10ರ ವರೆಗೆ ವಿಸ್ತರಿಸಿದೆ.

ADVERTISEMENT

ನಿರೀಕ್ಷಣಾ ಜಾಮೀನು ಕೋರಿ ಚಿದಂಬರಂ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ವಿಸ್ತೃತ ವರದಿ ಸಲ್ಲಿಸಲು ನಾಲ್ಕು ವಾರ ಕಾಲಾವಕಾಶ ಕೋರಿ ಜಾರಿ ನಿರ್ದೇಶನಾಲಯ ಪರ ಹಿರಿಯ ವಕೀಲರಾದ ಸೋನಿಯಾ ಮಾಥುರ್‌, ವಕೀಲ ನೀತೇಶ್ ರಾಣಾ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ, ಚಿದಂಬರಂ ಬಂಧನಕ್ಕೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಿಸಿ ಆದೇಶ ಹೊರಡಿಸಿದರು.

‘ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರೀಕ್ಷಣಾ ಜಾಮೀನು ಕೋರಿ ಚಿದಂಬರಂ ಪುತ್ರ ಕಾರ್ತಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಜುಲೈ 10ರಂದು ನಡೆಯಲಿದೆ. ಹೀಗಾಗಿ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಸಹ ಅದೇ ದಿನ ನಿಗದಿ ಮಾಡಬೇಕು’ ಎಂದು ಚಿದಂಬರಂ ಪರ ವಕೀಲರಾದ ಅಭಿಷೇಕ್‌ ಸಿಂಘ್ವಿ ಹಾಗೂ ಪಿ.ಕೆ.ದುಬೆ ಸಹ ಮನವಿ ಮಾಡಿದ್ದರು.
*
‘ಎಫ್‌ಐಆರ್‌ ಇಲ್ಲದಿದ್ದರೂ ತನಿಖೆ’
‘ಎಫ್‌ಐಆರ್‌ ದಾಖಲಾಗಿಲ್ಲ. ಆದರೂ ನನ್ನ ವಿರುದ್ಧ ತನಿಖೆಯನ್ನು ಆರಂಭಿಸಲಾಗಿದೆ’ ಎಂದು ಪಿ.ಚಿದಂಬರಂ ಹೇಳಿದ್ದಾರೆ.

ಏರ್‌ಸೆಲ್‌–ಮ್ಯಾಕ್ಸಿಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತಮ್ಮನ್ನು ವಿಚಾರಣೆಗೆ ಒಳಪಡಿಸಿದ ನಂತರ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

‘ತನಿಖೆ ನಡೆಸುತ್ತಿರುವ ಸಂಸ್ಥೆಗಳಿಗೆ ವಿಚಾರಣೆ ವೇಳೆ ನಾನು ನೀಡಿರುವ ಎಲ್ಲ ಉತ್ತರಗಳು ಸರ್ಕಾರದ ಬಳಿ ಈಗಾಗಲೇ ಇರುವ ಕಡತಗಳಲ್ಲಿ ದಾಖಲಾಗಿವೆ’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.