ADVERTISEMENT

ಒಳಮೀಸಲಾತಿ: ಇಸ್ಲಾಂ ತತ್ವಕ್ಕೆ ವಿರುದ್ಧ- ಉಮಾ ಭಾರತಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ನವದೆಹಲಿ (ಐಎಎನ್‌ಎಸ್): ವಿವಿಧ ಜನಸಮೂಹಗಳೆಡೆಗಿನ ತಾರತಮ್ಯವು ಇಸ್ಲಾಂನ ಮೂಲ ತತ್ವಗಳಿಗೆ ವಿರುದ್ಧವಾದದು. ಹೀಗಾಗಿ ಮುಸ್ಲಿಮರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿಯನ್ನು ಖಂಡಿಸಬೇಕು ಎಂದು ಬಿಜೆಪಿಯ ನಾಯಕಿ ಉಮಾ ಭಾರತಿ ಕರೆ ನೀಡಿದ್ದಾರೆ.

ಧರ್ಮಾಂಧ ಮನೋಧೋರಣೆಯ ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಒಳಮೀಸಲು ಕಲ್ಪಿಸಿದೆ ಎಂದು ಅವರು ಚುಚ್ಚಿದ್ದಾರೆ.

ರಾಷ್ಟ್ರದ ಮೊತ್ತಮೊದಲ ಪ್ರಧಾನಿ ಜವಾಹರಲಾಲ್ ನೆಹರು ಕೂಡ ಧರ್ಮಾಧಾರಿತ ಮೀಸಲಾತಿಯ ಪರ ಇರಲಿಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಜಾರಿಗೆ ತಂದಿರುವ ಈ ನೀತಿಯ ವಿರುದ್ಧ ಪಕ್ಷವು ಬೀದಿಯಲ್ಲಿ ಮಾತ್ರವಲ್ಲದೆ ಸಂಸತ್ತಿನಲ್ಲೂ ಹೋರಾಡಲಿದೆ ಎಂದು ಉತ್ತರ ಪ್ರದೇಶದಲ್ಲಿ ಬಿಜೆಪಿಯ ಪ್ರಮುಖ ಪ್ರಚಾರಕಿಯಾಗಿರುವ ಉಮಾ ಭಾರತಿ ಗುಡುಗಿದ್ದಾರೆ. ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರೆ ಹಿಂದುಳಿದ ಮುಸ್ಲಿಮರಿಗೆ ಒಬಿಸಿ ಕೋಟಾದೊಳಗೆ ಶೇ 9ರಷ್ಟು ಒಳಮೀಸಲು ಕಲ್ಪಿಸಲಾಗುವುದೆಂದು ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಸೋಮವಾರವಷ್ಟೇ ಹೇಳಿದ್ದರು.

ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಧರ್ಮಾಧಾರಿತ ರಾಜಕೀಯ ಸಲ್ಲ ಎಂದ ಅವರು ಒಳ ಮೀಸಲಾತಿ ಬಗ್ಗೆ ಎಲ್ಲ ಪಕ್ಷಗಳೂ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಮುಸ್ಲಿಮರಿಗೆ ಉದ್ಯೋಗ ಮೀಸಲಾತಿಯ ಪ್ರಯೋಜನ ಸೂಕ್ತ ಪ್ರಮಾಣದಲ್ಲಿ ದಕ್ಕದೇ ಇರುವುದಕ್ಕೆ ಅವರಲ್ಲಿ ಉನ್ನತ ಶಿಕ್ಷಣಕ್ಕೆ ಹೋಗುವವರು ಕಡಿಮೆ ಪ್ರಮಾಣದಲ್ಲಿರುವುದೇ ಮುಖ್ಯ ಕಾರಣ ಎಂದು  ಉಮಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.