ADVERTISEMENT

ಕರ್ತವ್ಯ ವೇಳೆ ಮೊಬೈಲ್ ಫೋನ್ ಬಳಸಿದ್ದನ್ನು ಪ್ರಶ್ನಿಸಿದ ಹಿರಿಯ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ಯೋಧ!

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 7:15 IST
Last Updated 18 ಜುಲೈ 2017, 7:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಮ್ಮು ಕಾಶ್ಮೀರ: ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೊಬೈಲ್ ಫೋನ್ ಬಳಸಿದ್ದನ್ನು ಪ್ರಶ್ನಿಸಿದ ಹಿರಿಯ ಅಧಿಕಾರಿಯನ್ನು ಭಾರತೀಯ ಸೇನೆಯ ಯೋಧನೊಬ್ಬ ಗುಂಡಿಕ್ಕಿ ಕೊಂದ ಘಟನೆ ಮಂಗಳವಾರ ನಡೆದಿದೆ.

ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಜಮ್ಮು ಕಾಶ್ಮೀರದ ಉರಿ ವಲಯದಲ್ಲಿ ಕರ್ತವ್ಯ ನಿರತರಾಗಿದ್ದ ಯೋಧ ಮೊಬೈಲ್ ಬಳಸುತ್ತಿದ್ದುದನ್ನು ಮೇಜರ್ ಶಿಖರ್ ಥಾಪಾ ಪ್ರಶ್ನಿಸಿದ್ದಾರೆ. ಈ ವಿಷಯದಲ್ಲಿ ಮೇಜರ್ ಮತ್ತು ಯೋಧನ ನಡುವೆ ವಾಗ್ವಾದ ನಡೆದಿದ್ದು ಸಿಟ್ಟುಗೊಂಡ ಯೋಧ ಮೇಜರ್ ಮೇಲೆ 5 ಗುಂಡುಗಳನ್ನು ಹಾರಿಸಿದ್ದಾನೆ ಎಂದು ಸೇನೆಯ ವಕ್ತಾರ ಹೇಳಿದ್ದಾರೆ. 71 ಸಶಸ್ತ್ರ ಪಡೆಯ ಮೇಜರ್ ಆಗಿದ್ದಾರೆ ಥಾಪಾ.

ಕರ್ತವ್ಯದಲ್ಲಿರುವಾಗ ಮೊಬೈಲ್ ಫೋನ್ ಬಳಸುವಂತಿಲ್ಲ ಎಂದು ಹೇಳಿ ಥಾಪಾ ಅವರು ಯೋಧನ ಕೈಯಿಂದ ಫೋನ್ ಕಿತ್ತುಕೊಂಡಿದ್ದರು. ಸೂಕ್ಷ್ಮ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಕಮಾಂಡಿಂಗ್ ಆಫೀಸರ್‍ಗೆ ದೂರು ನೀಡುವುದಾಗಿಯೂ ಥಾಪಾ ಅವರು ಯೋಧನಿಗೆ ಎಚ್ಚರಿಕೆ ನೀಡಿದ್ದರು ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ADVERTISEMENT

ಥಾಪಾ ಮತ್ತು ಯೋಧನ ನಡುವಿನ ಜಟಾಪಟಿಯಲ್ಲಿ ಫೋನ್ ಬಿದ್ದು ಹಾಳಾಗಿದೆ. ಅಷ್ಟರಲ್ಲಿ ಕೋಪಗೊಂಡ ಯೋಧ ತನ್ನ ಬಳಿ ಇದ್ದ ಎಕೆ-47ನಿಂದ ಗುಂಡು ಹಾರಿಸಿದ್ದು, ಸೋಮವಾರ ಮಧ್ಯರಾತ್ರಿ 12.15ಕ್ಕೆ ಈ ಘಟನೆ ನಡೆದಿದೆ.

ಈ ಬಗ್ಗೆ ಸೇನೆ ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸೇನಾ ವಕ್ತಾರರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.