ನವದೆಹಲಿ (ಪಿಟಿಐ) : ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ಕುರಿತು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಿಬಿಐಗೆ ಕೇಂದ್ರ ಸರ್ಕಾರ ಅಡ್ಡಿಯುಂಟುಮಾಡುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದ್ದು, ವಿಶೇಷ ತನಿಖಾ ತಂಡದಿಂದ ಹಗರಣದ ತನಿಖೆ ನಡೆಸುವಂತೆ ಶನಿವಾರ ಆಗ್ರಹಿಸಿದೆ.
'ಸಿಬಿಐಗೆ ಸ್ವತಂತ್ರವಗಿ ತನಿಖೆ ನಡೆಸಲು ಅಡ್ಡಿಪಡಿಸುತ್ತಿರುವ ಯುಪಿಎ ಒಂದು `ವಂಚಕ ಸರ್ಕಾರ' ಎಂದು ದೂರಿರುವ ಬಿಜೆಪಿ ನಾಯಕ ಅರುಣ್ ಜೇಟ್ಲಿ, `ಸತ್ಯಾಸತ್ಯತೆ ತಿಳಿಯಲು ಹಗರಣವನ್ನು ವಿಶೇಷ ತನಿಖಾ ತಂಡಕ್ಕೆ ಒಪ್ಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
`ಸಿಬಿಐಗೆ ಹಗರಣದ ಸತ್ಯಾಸತ್ಯತೆ ಕಂಡುಹಿಡಿಯಲು ಸಾಧ್ಯವಿಲ್ಲ. ಒಂದುವೇಳೆ ಸಿಬಿಐನಲ್ಲಿರುವ ಕೆಲವು ಪ್ರಾಮಾಣಿಕ ಅಧಿಕಾರಿಗಳು ಹಗರಣದ ಸತ್ಯ ಹುಡುಕಲು ಪ್ರಯತ್ನಿಸಿದರೆ ಸರ್ಕಾರ ಅವರಿಗೆ ಸ್ವತಂತ್ರವಗಿ ಕರ್ತವ್ಯ ನಿರ್ವಹಿಸಲು ಬಿಡುವುದಿಲ್ಲ' ಎಂದು ವಾಗ್ದಾಳಿ ನಡೆಸಿದರು.
`ಕಲ್ಲಿದ್ದಲು ಹಗರಣ ಗಂಭೀರ ವಿಷಯವಾಗಿದ್ದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ರಕ್ಷಿಸುವ ಸಲುವಾಗಿ ಸರ್ಕಾರ ಸಿಬಿಐ ತನಿಖೆ ಮೇಲೆ ಒತ್ತಡ ಹೇರುತ್ತಿದೆ. ಹೀಗಾಗಿ ವಿಶೇಷ ತನಿಖಾ ತಂಡದಿಂದ ಹಗರಣದ ತನಿಖೆ ನಡೆಸುವ ಅವಶ್ಯಕತೆ ಇದೆ ಎಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಟ್ವಿಟರ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.