ಜೈಪುರ (ಪಿಟಿಐ): ಮೀಸಲಾತಿ ವಿಚಾರ ಕುರಿತಂತೆ ರಾಜಸ್ತಾನ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಮ್ಮತಿಸಿರುವಂತೆಯೇ, ತಮ್ಮ ಮನಸ್ಸು ಬದಲಿಸಿರುವ ಗುಜ್ಜರ್ ನಾಯಕರು, ಮಾತುಕತೆಗೆ ಮೊದಲು ಸಮುದಾಯದ ಕಾಂಗ್ರೆಸ್ ನಾಯಕರು ಮಧ್ಯಪ್ರವೇಶಿಸಬೇಕು ಎಂಬ ಬೇಡಿಕೆಯನ್ನು ಶುಕ್ರವಾರ ಮುಂದಿಟ್ಟಿದ್ದಾರೆ.
ಗುಜ್ಜರ್ ಸಮುದಾಯದ 21 ಸದಸ್ಯರನ್ನೊಳಗೊಂಡ ನಿಯೋಗವೊಂದು ಶುಕ್ರವಾರ ರಾಜಸ್ತಾನ ಇಂಧನ ಸಚಿವ ಜಿತೇಂದ್ರ ಸಿಂಗ್, ಗೃಹ ಸಚಿವ ಶಾಂತಿ ಧರಿವಾಲ್ ಮತ್ತು ಸಾರಿಗೆ ಸಚಿವ ಬಿ.ಕೆ ಶರ್ಮಾ ಅವರನ್ನೊಳಗೊಂಡ ಸಮಿತಿಯನ್ನು ಜೈಪುರದಲ್ಲಿ ಭೇಟಿಯಾಗಿ ಮಾತುಕತೆ ನಡೆಸಬೇಕಿತ್ತು.
ಆದರೆ ಸರ್ಕಾರದೊಂದಿಗೆ ಚರ್ಚಿಸುವ ಮೊದಲು ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿರುವ ಸಮುದಾಯದ ಮುಖಂಡರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
‘ನಾವು ಸರ್ಕಾರದೊಂದಿಗೆ ಮಾತುಕತೆ ನಡೆಸಲು ಈಗಲೂ ಸಿದ್ಧರಿದ್ದೇವೆ. ಆದರೆ ಅದಕ್ಕೂ ಮೊದಲು ಈ ವಿಚಾರವನ್ನು ಪರಿಹರಿಸುವ ಕುರಿತಂತೆ ಸಚಿನ್ ಪೈಲಟ್ ಸೇರಿದಂತೆ ನಮ್ಮ ಸಮುದಾಯದ ನಾಯಕರ ಅಭಿಪ್ರಾಯವನ್ನು ತಿಳಿಯಲು ಬಯಸಿತ್ತೇವೆ’ ಎಂದು ಗುಜ್ಜರ್ ಮುಖಂಡ ಕಿರೋರೊ ಸಿಂಗ್ ಪ್ರತಿಭಟನೆಯ ಮೂಲ ಸ್ಥಳವಾದ ಪಿಲ್ಕಾಪುರದಲ್ಲಿ ಹೇಳಿದ್ದಾರೆ.
‘ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಅಭಿಪ್ರಾಯ ಕುರಿತಂತೆ ಸಮುದಾಯದ ನಾಯಕರಿಂದ ಪ್ರತಿಕ್ರಿಯೆ ಬಂದ ನಂತರ ನಮ್ಮ ನಿಯೋಗವನ್ನು ನಾವು ಜೈಪುರಕ್ಕೆ ಕಳುಹಿಸು ತ್ತೇವೆ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.