ADVERTISEMENT

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಪ್ರಸ್ತಾಪ?

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ನವದೆಹಲಿ (ಪಿಟಿಐ):  ಉತ್ತರ ಪ್ರದೇಶದ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪ್ರಕ್ಷವು ಅಲ್ಪಸಂಖ್ಯಾತರಿಗೆ ಶೇ 9ರಷ್ಟು ಒಳಮೀಸಲಾತಿ  ನೀಡುವ ಬಗ್ಗೆ ಭರವಸೆ ನೀಡುವ ಸಾಧ್ಯತೆ ಇದೆ.

`ಈ ವಿಚಾರವು ಪ್ರಣಾಳಿಕೆಯಲ್ಲಿ ಪ್ರಸ್ತಾವಗೊಳ್ಳುವ ಸಾಧ್ಯತೆ ಇದೆ~ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರೂ ಆಗಿರುವ ಸಲ್ಮಾನ್ ಖುರ್ಷಿದ್ ಅವರು ಉತ್ತರ ಪ್ರದೇಶ ಚುನಾವಣಾ ಪ್ರಣಾಳಿಕೆ ಕರಡು ಸಮಿತಿಯ ಮುಖ್ಯಸ್ಥರಾಗಿದ್ದಾರೆ.  ರೀಟಾ ಬಹುಗುಣ ಜೋಶಿ, ಪಿ.ಎಲ್.ಪುನಿಯಾ, ಸಂಜಯ್ ಸಿಂಗ್, ಜೈರಾಂ ರಮೇಶ್ ಈ ಸಮಿತಿಯ ಇತರ ಸದಸ್ಯರಾಗಿದ್ದಾರೆ.

ನೀತಿ ಸಂಹಿತೆ ಉಲ್ಲಂಘಿಸಿಲ್ಲ: ಖುರ್ಷಿದ್
ಮುಸ್ಲಿಮರಿಗೆ ಶೇ 9ರಷ್ಟು ಒಳಮೀಸಲಾತಿ ನೀಡುವ ಕುರಿತಂತೆ ಹೇಳಿಕೆ ನೀಡಿ ಚುನಾವಣಾ ಆಯೋಗದಿಂದ ನೋಟಿಸ್ ಪಡೆದಿದ್ದರೂ ಯಾವುದೇ ಗೊಂದಲಕ್ಕೆ ಒಳಗಾಗದ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಬುಧವಾರ ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ.

`ನಾವು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ. ನನ್ನ ಅಭಿಪ್ರಾಯಗಳನ್ನು ಹೇಳಲು ನನಗೆ ಹಕ್ಕಿದೆ. ಅವುಗಳು ಜನರಿಗೆ ತಲುಪಬೇಕು~ ಎಂದು ಖುರ್ಷಿದ್ ಸುದ್ದಿಗಾರರಿಗೆ ತಿಳಿಸಿದರು.

`ಅದರರ್ಥ ನಾವು ಚುನಾವಣಾ ಪ್ರಣಾಳಿಕೆಯನ್ನು ತರಬಾರದು ಅಂತಾನ, ಯಾವುದೇ ಭಾಷಣಗಳನ್ನು ಮಾಡದೆ, ಮನೆಯಲ್ಲಿ ಕುಳಿತುಕೊಳ್ಳಬೇಕು ಎಂದೇ, ಚುನಾವಣೆಗಳು ಇವೆಲ್ಲದರ ಹೊರತಾಗಿ ರಬೇಕು ಎಂದೇ~ ಎಂದು ಅವರು ಪ್ರಶ್ನಿಸಿದರು.

`ಅದು ಕೇವಲ ಒಂದು ನೋಟಿಸ್ ಅಷ್ಟೇ. ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಕೊಲ್ಲಲು ಹೊರಡಿಸಿದ ಆದೇಶವಲ್ಲ. ಮುಲಾಯಂ ಸಿಂಗ್ ಅವರು ಶೇ18 ಮತ್ತು 28ರಷ್ಟು ಮೀಸಲಾತಿ ಬಗ್ಗೆ ಮಾತನಾಡುತ್ತಾರೆ. ಇಷ್ಟು ಪ್ರಮಾಣದ ಮೀಸಲಾತಿಯನ್ನು ಎಲ್ಲಿಂದ  ತರುತ್ತಾರೆ ಎಂದು ಅವರನ್ನು ಕೇಳಿ. ನಾವು ಅದನ್ನು ಕೇಂದ್ರದ ಮಟ್ಟದಲ್ಲಿ ಜಾರಿಗೆ ತಂದಿದ್ದೇವೆ. ಉತ್ತರ ಪ್ರದೇಶದಲ್ಲಿ ನಾವು ಅಧಿಕಾರಕ್ಕೆ ಬಂದರೇ ಇಲ್ಲೂ ಅದನ್ನು ಜಾರಿಗೆ ತರುತ್ತೇವೆ~ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.