ನವದೆಹಲಿ (ಐಎಎನ್ಎಸ್): ಹಿಂದಿ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಶ್ಯಾಂ ಬೆನಗಲ್, ಗಿರೀಶ್ ಕಾರ್ನಾಡ್ ಹಾಗೂ ನಿರ್ದೇಶಕ ಮಧುರ್ ಭಂಡಾರ್ಕರ್ ಅವರಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಬುಧವಾರ ಗಂಗಾ ಶರಣ್ ಸಿಂಗ್ ಪ್ರಶಸ್ತಿ ನೀಡಿ ಗೌರವಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಭಾ ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ಪ್ರಮಾಣಪತ್ರ ಹಾಗೂ ಒಂದು ಲಕ್ಷ ರೂಪಾಯಿಯ ಚೆಕ್ ಒಳಗೊಂಡಿದೆ.
`ಇಷ್ಟು ವರ್ಷಗಳ ಅವಧಿಯಲ್ಲಿ ಪ್ರೇಕ್ಷಕರು ಮತ್ತು ಸಿನಿಮಾ ಉದ್ದಿಮೆ ಮಾತ್ರವಲ್ಲದೆ ಸರ್ಕಾರ ಕೂಡ ನನ್ನ ಕಾರ್ಯಕ್ಕೆ ಮಾನ್ಯತೆ ನೀಡಿದ್ದು, ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಕೃತಜ್ಞನಾಗಿದ್ದೇನೆ~ ಎಂದು `ಚಾಂದ್ನಿ ಬಾರ್~ ಮತ್ತು `ಪೇಜ್ 3~ ಸಿನಿಮಾಗಳಿಂದ ಖ್ಯಾತರಾದ ಭಂಡಾರ್ಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಹಿಂದಿ ಸೇವಾ ಪ್ರಶಸ್ತಿ ಯೋಜನೆಯಡಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 28 ಮಂದಿಯನ್ನೂ ಕೇಂದ್ರೀಯ ಹಿಂದಿ ಸಂಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.
ಗಂಗಾ ಶರಣ್ ಸಿಂಗ್ ಪ್ರಶಸ್ತಿಯು ಹಿಂದಿ ಸಾಹಿತ್ಯಕ್ಕೆ ಕೊಡುಗೆ ನೀಡಿದ ಉತ್ತಮ ಬರಹಗಾರರಿಗೆ ನೀಡುವ ಸಾಹಿತ್ಯ ಪ್ರಶಸ್ತಿಯಾಗ್ದ್ದಿದರೂ ಕೂಡ ತಮ್ಮ ಕಾರ್ಯಕ್ಷೇತ್ರದ ಮೂಲಕ ಹಿಂದಿ ಭಾಷೆಯನ್ನು ಪ್ರೋತ್ಸಾಹಿಸುವವರಿಗೂ ಈ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.