ಚೆನ್ನೈ: ಮೆಟ್ಟೂರು ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ತಗ್ಗಿದ ಕಾರಣ ಕುರುವೈ ಭತ್ತದ ಬೆಳೆಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ತಮಿಳುನಾಡು ಶುಕ್ರವಾರ ಸ್ಪಷ್ಟವಾಗಿ ಹೇಳಿದೆ.
ಕಾವೇರಿ ಜಲಾನಯನ ಪ್ರದೇಶದ 12 ಜಿಲ್ಲೆಗಳ ಅಂದಾಜು 16 ಲಕ್ಷ ಎಕರೆ ಪ್ರದೇಶದಲ್ಲಿ ಜೂನ್ನಲ್ಲಿ ಆರಂಭವಾಗುವ ಕೃಷಿ ಚಟುವಟಿಕೆಗಳಿಗೆ ಜೂನ್ 12ರಂದು ಮೆಟ್ಟೂರಿನ ಸ್ಟ್ಯಾನ್ಲಿ ಜಲಾಶಯದಿಂದ ನೀರು ಹರಿಸುವುದು ವಾಡಿಕೆ. ಆದರೆ, ನೀರಿನ ಕೊರತೆ ಕಾರಣ ಸತತ ಏಳು ವರ್ಷದಿಂದ ಈ ಸಂಪ್ರದಾಯ ಮುರಿಯಲಾಗುತ್ತಿದೆ.
ನೀರಿನ ಕೊರತೆ ಕಾರಣ ಕೃಷಿ ಚಟುವಟಿಕೆಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಶುಕ್ರವಾರ ಸದನದಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಸದ್ಯ ಲಭ್ಯವಿರುವ ನೀರನ್ನು ಬಳಸಿ ಭತ್ತದ ನಾಟಿ ಆರಂಭಿಸುವಂತೆ ರೈತರಿಗೆ ಮನವಿ ಮಾಡಿದ ಅವರು, ಕೃಷಿ ಚಟುವಟಿಕೆಗಳಿಗೆ ₹115 ಕೋಟಿ ಪ್ಯಾಕೇಜ್ ಪ್ರಕಟಿಸಿದ್ದಾರೆ.
ಬಿತ್ತನೆ ಬೀಜ, ಗೊಬ್ಬರ, ಕೃಷಿ ಸಲಕರಣೆ ಖರೀದಿಗೆ ಸಬ್ಸಿಡಿ ಸೇರಿದಂತೆ ಹಲವು ಉತ್ತೇಜನಾ ಕ್ರಮಗಳನ್ನು ಅವರು ಇದೇ ವೇಳೆ ಘೋಷಿಸಿದ್ದಾರೆ.
ಸರ್ಕಾರದ ನಿರ್ಧಾರವನ್ನು ವಿರೋಧಿಸಿ ವಿರೋಧ ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಸದಸ್ಯರು ಸದನದಿಂದ ಹೊರ ನಡೆದರು.
*
ಮೆಟ್ಟೂರು ಜಲಾಶಯದಲ್ಲಿ ಕೇವಲ 39 ಅಡಿ ನೀರಿದೆ. ಕೃಷಿ ಚಟುವಟಿಕೆಗಳಿಗೆ ನೀರು ಬಿಡಲು ಸಾಧ್ಯವಿಲ್ಲ. ನೀರಿನ ಸಂಗ್ರಹ 90 ಅಡಿ ತಲುಪಿದರೆ ಮಾತ್ರ ಕೃಷಿಗೆ ನೀರು ಬಿಡಲಾಗುವುದು.
–ಕೆ. ಪಳನಿಸ್ವಾಮಿ, ತಮಿಳುನಾಡು ಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.