ADVERTISEMENT

ಕೃತಿಚೌರ್ಯ ವಿವಾದ: ಸಿಎನ್‌ಆರ್ ವಿಷಾದ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ನವದೆಹಲಿ: ಖ್ಯಾತ ವಿಜ್ಞಾನಿ ಮತ್ತು ಪ್ರಧಾನಿ ಅವರ ವೈಜ್ಞಾನಿಕ ಸಲಹೆಗಾರ ಸಿಎನ್‌ಆರ್ ರಾವ್ ಮತ್ತು ಇತರ ಮೂವರು ಬೆಂಗಳೂರು ಮೂಲದ ವಿಜ್ಞಾನಿಗಳು ಕೃತಿಚೌರ್ಯದ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

 ಸಿಎನ್‌ಆರ್ ರಾವ್ ಮತ್ತು ಇತರ ವಿಜ್ಞಾನಿಗಳು ಆಗಿರುವ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸಿದ್ದು, ವಿಜ್ಞಾನ ನಿಯತಕಾಲಿಕೆಯೊಂದರಲ್ಲಿ ಈ ಬಗ್ಗೆ ಮೂಲ ಲೇಖಕರ ಕ್ಷಮೆ ಯಾಚಿಸಿದ್ದಾರೆ.

ಅಡ್ವಾನ್ಸಡ್ ಮೆಟೀರಿಯಲ್ಸ್ ನಿಯತಕಾಲಿಕೆಯಲ್ಲಿ ರಾವ್ ಮತ್ತು ಇತರರು ಬರೆದಿರುವ ವೈಜ್ಞಾನಿಕ ಲೇಖನದ ಮೊದಲ ಪ್ಯಾರಾವು 2010ರಲ್ಲಿ ಅಪ್ಲೈಡ್ ಫಿಜಿಕ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಕ್ಕೆ ಸಂಪೂರ್ಣ ಹೋಲುವುದರಿಂದ ವಿವಾದ ಎದ್ದಿದೆ.

ರಾವ್ ಅವರ ಜತೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳಾದ ಎಸ್. ಬಿ. ಕೃಪಾನಿಧಿ, ಬಸಂತ್ ಚಿತಾರಾ ಮತ್ತು ಎಲ್. ಎಸ್. ಪಂಚಕರ್ಲಾ ಅವರು ಸೇರಿಕೊಂಡು ಬರೆದ ವೈಜ್ಞಾನಿಕ ಲೇಖನದ ಮೊದಲ ಪ್ಯಾರಾವು ಈ ಮೊದಲು ಪ್ರಕಟವಾಗಿರುವ ಲೇಖನದ ಮೊದಲ ಪ್ಯಾರಾಕ್ಕೆ ಹೋಲಿಕೆಯಾಗುತ್ತದೆ.

`ಸಾಮಾನ್ಯವಾಗಿ ಲೇಖನದ ಆರಂಭವು ಒಂದೇ ರೀತಿಯಾಗಿ ಇರುತ್ತದೆ ಎಂಬ ಕಾರಣಕ್ಕೆ ನಾವು ಅಷ್ಟೊಂದು ಗಮನ ಹರಿಸಿಲ್ಲ~ ಎಂದು  ಕೃಪಾನಿಧಿ ಅವರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

`ಈಗ ಅಮೆರಿಕದಲ್ಲಿ ಇರುವ ಮೂಲ ಲೇಖಕರು ಹಿರಿಯ ವಿಜ್ಞಾನಿಗಳಾಗಿದ್ದು, ಅವರನ್ನು ಇ-ಮೇಲ್ ಮತ್ತು ದೂರವಾಣಿ ಮೂಲಕ ಸಂಪರ್ಕಿಸಿ ಆಗಿರುವ ಪ್ರಮಾದದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದೇವೆ, ಅವರು ಸಹ ಅದನ್ನು ಒಪ್ಪಿಕೊಂಡಿದ್ದಾರೆ~ ಎಂದು  ಕೃಪಾನಿಧಿ ಅವರು ತಿಳಿಸಿದ್ದಾರೆ.

ರಾವ್ ಅವರು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ. ಲೇಖನವನ್ನು ವಾಪಸ್ ಪಡೆಯುವುದಾಗಿ ರಾವ್ ಅವರು ನಿಯತಕಾಲಿಕೆಯ ಸಂಪಾದಕ ಮಂಡಲಿಗೆ ತಿಳಿಸಿದ್ದರು. ಆದರೆ ಪತ್ರಿಕೆ ಲೇಖನವನ್ನು ವಾಪಸ್ ಪಡೆಯುವುದು ಬೇಡ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.