ತಿರುವನಂತಪುರ: ಗಾಯಕ ರಾಜೇಶ್ (36) ಅವರನ್ನು ಇಲ್ಲಿನ ಪಲ್ಲಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮಡವೂರ್ನಲ್ಲಿ ಅಪರಿಚಿತರ ಗುಂಪು ಹತ್ಯೆ ಮಾಡಿದೆ. ಅವರ ಸ್ನೇಹಿತ ಕುಟ್ಟನ್ ಗಾಯಗೊಂಡಿದ್ದಾರೆ.
ರಾಜೇಶ್ ಮಡವೂರಿನಲ್ಲಿ ಸ್ವಂತ ಸ್ಟುಡಿಯೊ ಹೊಂದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ರಾಜೇಶ್ ಮತ್ತು ಕುಟ್ಟನ್ ಸೋಮವಾರ ತಡರಾತ್ರಿ ಸ್ಟುಡಿಯೊಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಸ್ಟುಡಿಯೊಗೆ ಕಾರಿನಲ್ಲಿ ಬಂದ ಶಸ್ತ್ರಧಾರಿ ಗುಂಪು ಈ ಕೃತ್ಯ ಎಸಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿದ್ದ ಕುಟ್ಟನ್ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬಂದು ಸ್ಥಳೀಯರಿಗೆ ವಿಷಯ ತಿಳಿಸಿದರು. ರಾಜೇಶ್ ಅವರನ್ನು ಕೂಡಲೇ ಕೊಲ್ಲಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಕುಟ್ಟನ್ ಅವರಿಗೆ ತಿರುವನಂತಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜೇಶ್ ಹತ್ಯೆಗೆ ಕಾರಣವೇನು ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಯಬೇಕಿದೆ. ಅವರಿಗೆ ಪತ್ನಿ ಮತ್ತು ಪುತ್ರ ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.