ADVERTISEMENT

ಕೊನೆಗೂ ಲೋಕಪಾಲ ಅಂಗೀಕಾರ

ಭ್ರಷ್ಟಾಚಾರ ತಡೆ ಮಸೂದೆಗೆ ಲೋಕಸಭೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:32 IST
Last Updated 18 ಡಿಸೆಂಬರ್ 2013, 19:32 IST

ನವದೆಹಲಿ (ಪಿಟಿಐ): ಕಳೆದ 50 ವರ್ಷಗಳ ಎಂಟು ವಿಫಲ ಯತ್ನಗಳ ನಂತರ ಭಾರತ ಲೋಕಪಾಲ ಕಾನೂನು ರಚಿಸುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆ ಇರಿಸಿದೆ.

ಆಂಧ್ರ ಪ್ರದೇಶ ವಿಭಜನೆ ವಿರೋಧಿಸಿ ಸೀಮಾಂಧ್ರ ಭಾಗದ ಸಂಸದರ ಗದ್ದಲದ ನಡುವೆಯೇ ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆ 2013 ಲೋಕಸಭೆಯಲ್ಲಿ ಧ್ವನಿಮತದ ಅಂಗೀಕಾರ ಪಡೆಯಿತು.

ಈ ಮೂಲಕ ಪ್ರಧಾನಿ ಕಚೇರಿಯ ಮೇಲೆಯೂ ನಿಗಾ ಇರಿಸುವ ಭ್ರಷ್ಟಾಚಾರ ತಡೆಗಟ್ಟುವ ಲೋಕಪಾಲ ನೇಮಕಕ್ಕೆ ಹಾದಿ ಸುಗಮವಾಗಿದೆ.

ಈ ಮಸೂದೆಯನ್ನು  ಲೋಕಸಭೆಯಲ್ಲಿ 2011ರ ಡಿಸೆಂಬರ್‌­ನಲ್ಲಿಯೇ ಅಂಗೀಕರಿಸಲಾಗಿತ್ತು. ಆದರೆ ರಾಜ್ಯಸಭೆ­ಯಲ್ಲಿ ಮಸೂದೆಯು ತಿದ್ದುಪಡಿಗೊಳಗಾದ ಕಾರಣದಿಂದ ಮತ್ತೆ ಮಸೂದೆಗೆ ಲೋಕಸಭೆ ಅಂಗೀಕಾರ ನೀಡ­ಬೇಕಾ­ಯಿತು.ಎಸ್‌ಪಿ ಮತ್ತು ಶಿವಸೇನೆ ಸಂಸದರು ಮಸೂದೆಯನ್ನು ವಿರೋಧಿಸಿ ಸಭಾತ್ಯಾಗ ಮಾಡಿದರು.

ತಿದ್ದುಪಡಿಗೊಂಡ ಮಸೂದೆಗೆ ಮಂಗಳ­ವಾರ ರಾಜ್ಯಸಭೆ ಅನುಮೋದನೆ ನೀಡಿತ್ತು.

ಲೋಕಪಾಲ ಮಸೂದೆ ಸಂಸತ್ತಿನ ಉಭಯಸದನಗಳಲ್ಲಿ ಅಂಗೀಕಾರಗೊಂಡ ಕೂಡಲೇ, ಲೋಕಪಾಲಕ್ಕಾಗಿ ಒತ್ತಾಯಿಸಿ ಒಂಬತ್ತು ದಿನಗಳಿಂದ ರಾಳೆಗಣಸಿದ್ಧಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾಹಜಾರೆ ನಿರಶನ ಅಂತ್ಯಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.