ADVERTISEMENT

ಕೋಟಿ ರೂಪಾಯಿ ನಗದು ವಶ: ರಾಷ್ಟ್ರಪತಿ ಪುತ್ರನ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 9:45 IST
Last Updated 21 ಫೆಬ್ರುವರಿ 2012, 9:45 IST

ಅಮರಾವತಿ (ಮಹಾರಾಷ್ಟ್ರ) (ಪಿಟಿಐ): ನಗರ- ಪುರಸಭೆ ಚುನಾವಣೆಗಳಿಗೆ ಮುಂಚಿತವಾಗಿ ಇಲ್ಲಿ ವಶ ಪಡಿಸಿಕೊಳ್ಳಲಾದ ಒಂದು ಕೋಟಿ ರೂಪಾಯಿಗಳ ಲೆಕ್ಕಪತ್ರಗಳಿಲ್ಲದ ಹಣಕ್ಕೆ ಸಂಬಂಧಿಸಿದಂತೆ ಅಮರಾವತಿ ಪೊಲೀಸರು ಮಂಗಳವಾರ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪುತ್ರ ಹಾಗೂ ಕಾಂಗ್ರೆಸ್ ಶಾಸಕ ರಾವ್ ಸಾಹೇಬ್ ಶೆಖಾವತ್ ಅವರನ್ನು ಪ್ರಶ್ನಿಸಿದರು.

ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಗಣೇಶ ಪಾಟೀಲ್ ಮತ್ತು ವಕೀಲರ ದಂಡಿನೊಂದಿಗೆ ಪೊಲೀಸ್ ಕಮೀಷನರ್ ಕಚೇರಿಗೆ ಈದಿನ ಬೆಳಿಗ್ಗೆ ಆಗಮಿಸಿದ ಶೇಖಾವತ್  ತಮ್ಮ ಹೇಳಿಕೆಯನ್ನು ದಾಖಲಿಸಿದರು.

~ವಶ ಪಡಿಸಿಕೊಳ್ಳಲಾದ ಹಣದ ಮೂಲ ಮತ್ತು ಗಮ್ಯ ಸ್ಥಾನದ ಬಗ್ಗೆ ನಾವು ಪ್ರಶ್ನಿಸಿದೆವು. ಶೆಖಾವತ್ ಅವರು ಅದು ಪಕ್ಷದ ನಿಧಿ ಎಂದು ಪುನರುಚ್ಚರಿಸಿದರು~ ಎಂದು  ಅಮರಾವತಿ ಪೊಲೀಸ್ ಕಮೀಷನರ್ ಅಮಿತೇಶ್ ಕುಮಾರ್  ಸುದ್ದಿಗಾರರಿಗೆ ತಿಳಿಸಿದರು. ತನಿಖೆ ನಿರ್ಣಾಯಕ ಹಂತದಲ್ಲಿದ್ದು ನಾವು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ನುಡಿದರು.

ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿಯು ಕಳುಹಿಸಿದ  ಒಂದು ಕೋಟಿ ರೂಪಾಯಿಗಳ ಬಗ್ಗೆ ಅಗತ್ಯಕ್ಕೆ ಅನುಗುಣವಾದ ವಿವರಗಳನ್ನು ನಾವು ನೀಡಿದ್ದೇವೆ. ಸಂಬಂಧಪಟ್ಟ ದಾಖಲೆಗಳನ್ನೂ ಪೊಲೀಸರಿಗೆ ಒದಗಿಸಿದ್ದೇವೆ ಎಂದು ಶೆಖಾವತ್ ಹೇಳಿದರು.

ಒಂದು ಕೋಟಿ ರೂಪಾಯಿಗಳ ಪೈಕಿ 87 ಲಕ್ಷ ರೂಪಾಯಿಗಳನ್ನು ಕಾಂಗ್ರೆಸ್ ಅಭ್ಯರ್ಥಿಗಳಿಗೆ ವಿತರಿಸುವ ಸಲುವಾಗಿ ಇಟ್ಟುಕೊಳ್ಳಲಾಗಿತ್ತು. ಉಳಿದ ಹಣವನ್ನು ಪಕ್ಷದ ಅಮರಾವತಿ ನಗರ ಘಟಕವು ತನ್ನ ಬಳಿ ಇಟ್ಟುಕೊಳ್ಳಬೇಕಾಗಿತ್ತು ಎಂದು ಶಾಸಕರು ನುಡಿದರು.

ಒಂದು ಕೋಟಿ ರೂಪಾಯಿ ಮೌಲ್ಯದ ನಗದು ಹಣವನ್ನು ನಾಗಪುರದಿಂದ ನಗರಕ್ಕೆ ಕಾರಿನಲ್ಲಿ ತರುತ್ತಿದ್ದಾಗ ಫೆಬ್ರುವರಿ 12ರ ನಸುಕಿನಲ್ಲಿ ವಶ ಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.