ಹೈದರಾಬಾದ್ (ಪಿಟಿಐ) : ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಕುರಿತು ಪರ ಹಾಗೂ ವಿರೋಧಿ ಬಣಗಳ ಗದ್ದಲದ ನಡುವೆಯೂ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಸೋಮವಾರ ಆಂಧ್ರ ಪ್ರದೇಶ ಪುನರ್ ರಚನೆ ಕರಡು ಮಸೂದೆ ಮಂಡನೆಯಾಗಿದೆ
ಸ್ಪೀಕರ್ ಅವರ ಸಲಹೆಯ ಮೇರೆಗೆ ಶಾಸಕಾಂಗದ ಕಾರ್ಯದರ್ಶಿ ಎಸ್. ರಾಜಾ ಸದಾರಾಂ ಅವರು ಕರಡು ಪ್ರತಿಯನ್ನು ಸದನದಲ್ಲಿ ಮಂಡಿಸಿದರು. ಅಲ್ಲದೆ ತೆಲಂಗಾಣ ರಚನೆ ಕುರಿತು ತನ್ನ ಅಭಿಪ್ರಾಯ ತಿಳಿಸುವಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಡಿಸೆಂಬರ್ 12ರಂದು ರಾಜ್ಯಕ್ಕೆ ಕಳುಹಿಸಿದ ಆದೇಶದ ಪ್ರತಿಯನ್ನು ಉಲ್ಲೇಖಿಸಿದರು. ಸಂವಿಧಾನದ 3ನೇ ವಿಧಿಯನ್ವಯ ಮಸೂದೆಯನ್ನು ಮಂಡಿಸಿದರು.
ಈ ವೇಳೆ ತೆಲಂಗಾಣ ಪ್ರಾಂತ್ಯದ ಶಾಸಕರು ಮಸೂದೆ ಮಂಡನೆಯಾಗಿದ್ದಕ್ಕೆ ಘೋಷಣೆ ಕೂಗುವ ಮೂಲಕ ಹರ್ಷ ವ್ಯಕ್ತಪಡಿಸಿದರೆ ಇತ್ತ ಕರಾವಳಿ ಆಂಧ್ರ ಮತ್ತು ರಾಯಲಸೀಮಾ ಪ್ರದೇಶದ ಶಾಸಕರು ಕರಡು ಪ್ರತಿಯನ್ನು ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.
ಬಳಿಕ ಸದನದಲ್ಲಿ ತೀವ್ರ ಗದ್ದಲ ಏರ್ಪಟ್ಟು ಕೆಲಕಾಲ ಕಲಾಪ ಮುಂದೂಡಲಾಯಿತು. ಇದಕ್ಕೂ ಮುನ್ನ ಗದ್ದಲದ ನಡುವೆಯೇ ವಿಧಾನಸಭೆಯ ನಿಯಮದಂತೆ ಕರಡು ಮಸೂದೆ ಮಂಡನೆಯಾಗಿರುವುದನ್ನು ಸ್ಪೀಕರ್ ಅವರು ಘೋಷಿಸಿದರು. ಅಲ್ಲದೆ ಕರಡು ಮಸೂದೆಯ ಪ್ರತಿ ತೆಲುಗು ಮತ್ತು ಉರ್ದು ಭಾಷೆಯಲ್ಲಿ ಲಭ್ಯವಿದೆ ಎಂದು ಸದಸ್ಯರ ಗಮನಕ್ಕೆ ತಂದರು.
ಆಂಧ್ರ ಪ್ರದೇಶ ಪುನರ್ ರಚನೆ ಕರಡು ಮಸೂದೆ ಪ್ರತಿ ಅಧಿಕೃತ ಜಾಲತಾಣ http://www.aplegislature.org ಲಭ್ಯವಿದೆ.
ಈ ವಿಷಯವಾಗಿ ತೆಲಂಗಾಣ ಹಾಗೂ ಸೀಮಾಂಧ್ರ ಶಾಸಕರು ಕೋಲಾಹಲ ಎಬ್ಬಿಸಿದ್ದರಿಂದ ಕರಡು ಮಸೂದೆಯು ವಿಧಾನಸಭೆಯಲ್ಲಿ ಶುಕ್ರವಾರ ಮಂಡನೆಯಾಗಿರಲಿಲ್ಲ.
ಇನ್ನೊಂದೆಡೆ ತೆಲಂಗಾಣ ರಚನೆಗೆ ಅಡ್ಡಿಯಾಗುತ್ತಿರುವ ಮುಖ್ಯಮಂತ್ರಿ ವಿರುದ್ಧ ‘ಅವಿಶ್ವಾಸ ಗೊತ್ತುವಳಿ’ ಮಂಡಿಸುವುದಾಗಿ ಉಪಮುಖ್ಯಮಂತ್ರಿ ದಾಮೋದರ ರಾಜ ನರಸಿಂಹ ಬೆದರಿಕೆ ಹಾಕಿದ್ದರು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಸೋಮವಾರ ಕರಡು ಮಸೂದೆ ಮಂಡನೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.