ADVERTISEMENT

ಗಲಭೆ: ಅಲ್ಪಸಂಖ್ಯಾತ ಆಯೋಗದಿಂದ ತನಿಖೆ

ಪಿಟಿಐ
Published 4 ಜೂನ್ 2018, 19:30 IST
Last Updated 4 ಜೂನ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ನಡೆದ ಗಲಭೆಯ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಸದಸ್ಯ ಮಂಜಿತ್‌ ಸಿಂಗ್‌ ರಾಯ್‌ ಅವರನ್ನು ಕಳುಹಿಸಲಾಗುವುದು ಎಂದು ಆಯೋಗದ ಅಧ್ಯಕ್ಷ ಸೈಯದ್‌ ಘಯೋರುಲ್‌ ಹಸನ್‌ ರಿಜ್ವಿ ಸೋಮವಾರ ಹೇಳಿದ್ದಾರೆ.

‘ಮಂಜಿತ್‌ ಸಿಂಗ್‌ ಅವರು ಶಿಲ್ಲಾಂಗ್‌ಗೆ ತೆರಳಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ವರದಿ ನೀಡುವರು. ಅದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಶಿಲ್ಲಾಂಗ್‌ನ ಪಂಜಾಬಿ ಲೈನ್‌ ಪ್ರದೇಶದಲ್ಲಿ ಗುರುವಾರ ಬಸ್‌ ಚಾಲಕರೊಬ್ಬರಿಗೆ ಸ್ಥಳೀಯರು ಹಲ್ಲೆ ನಡೆಸಿದ ಬಳಿಕ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು.

ADVERTISEMENT

ಈ ಮಧ್ಯೆ ಅರೆಸೇನಾ ಪಡೆಯ ಸಾವಿರ ಯೋಧರನ್ನು ಗಲಭೆಪೀಡಿತ ಶಿಲ್ಲಾಂಗ್‌ಗೆ ಕಳುಹಿಸಲಾಗಿದೆ. ಈ ಪ್ರದೇಶದಲ್ಲಿ ಮತ್ತೆ ಕರ್ಫ್ಯೂ ವಿಧಿಸಲಾಗಿದ್ದು ಜನರಲ್ಲಿ ವಿಶ್ವಾಸ ಮೂಡಿಸಲು ಯೋಧರು ಪಥಸಂಚಲನ ನಡೆಸಿದರು.

ಶಿಲ್ಲಾಂಗ್‌ನಲ್ಲಿ ಭಾನುವಾರ ರಾತ್ರಿ ಮತ್ತೆ ಗಲಭೆ ಮರುಕಳಿಸಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಸಿಆರ್‌ಪಿಎಫ್‌ ಶಿಬಿರದ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರು ಎಂದು  ಮೇಘಾಲಯದ ಡಿಜಿಪಿ ಎಸ್‌.ಬಿ.ಸಿಂಗ್‌ ಹೇಳಿದ್ದಾರೆ.

ಗಲಭೆಗೆ ಸಂಬಂಧಿಸಿ ಮಾವ್ಕಾರ್‌ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ಸ್ಥಳಾಂತರಿಸಲು ಯತ್ನಿಸುತ್ತಿದ್ದಾಗ ಘರ್ಷಣೆ ನಡೆದಿದೆ. ಈ ವೇಳೆ ಪ್ರತಿಭಟನಾಕಾರರು ಪೊಲೀಸರ ವಾಹನಕ್ಕೆ ಹಾನಿ ಎಸಗಿ, ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ. ಹಿಂಸಾಚಾರದಿಂದಾಗಿ ನಾಲ್ಕನೇ ದಿನವೂ ಜನಜೀವನ ಅಸ್ತವ್ಯಸ್ತವಗಿದ್ದು, ಲುಂಬ್ದಿಂಗ್‌ಜ್ರಿ ಮತ್ತು ಕಂಟೋನ್ಮೆಂಟ್‌ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.