ADVERTISEMENT

ಗಲ್ಲುಶಿಕ್ಷೆ ಸಮರ್ಥಿಸಿದ ಹೈಕೋರ್ಟ್‌

ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST
ಗಲ್ಲುಶಿಕ್ಷೆ ಸಮರ್ಥಿಸಿದ ಹೈಕೋರ್ಟ್‌
ಗಲ್ಲುಶಿಕ್ಷೆ ಸಮರ್ಥಿಸಿದ ಹೈಕೋರ್ಟ್‌   

ನವದೆಹಲಿ (ಐಎಎನ್‌ಎಸ್‌): ರಾಜಧಾನಿ ದೆಹಲಿಯಲ್ಲಿ 2012ರ ಡಿ. 16ರಂದು ಪ್ಯಾರಾಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂ­ಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ವಿಚಾರಣಾ ನ್ಯಾಯಾ­ಲಯ ವಿಧಿಸಿದ್ದ  ಮರಣ ದಂಡನೆ­ಯನ್ನು ದೆಹಲಿ ಹೈಕೋರ್ಟ್‌ ಗುರು­ವಾರ ಎತ್ತಿ ಹಿಡಿದಿದೆ.

ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಈ ನಾಲ್ವರು ಹೈಕೋ­ರ್ಟ್‌ಗೆ ಮೇಲ್ಮನವಿ ಸಲ್ಲಿಸಿ­ದ್ದರು. ನ್ಯಾಯಮೂರ್ತಿಗಳಾದ ರೇವಾ ಖೇತ್ರಪಾಲ್‌್ ಹಾಗೂ ಪ್ರತಿಭಾ ರಾಣಿ ಅವರಿದ್ದ ಪೀಠ ಇದನ್ನು ತಳ್ಳಿಹಾಕಿದೆ.

ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾ­ಲಯವು 2013ರ ಸೆಪ್ಟೆಂ­ಬರ್‌ 13ರಂದು ಮುಕೇಶ್‌ (26), ಅಕ್ಷಯ್‌ ಠಾಕೂರ್‌್ (28), ಪವನ್‌ ಗುಪ್ತಾ (19) ಹಾಗೂ ವಿನಯ್‌ ಶರ್ಮಾಗೆ ಗಲ್ಲು ಶಿಕ್ಷೆ ವಿಧಿಸಿತ್ತು.

ಗೆಳೆಯನೊಂದಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯ ಮೇಲೆ  ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ನಂತರ ಇವರಿ­ಬ್ಬರನ್ನು ರಸ್ತೆ ಪಕ್ಕ ಎಸೆದು ಹೋಗಿ­ದ್ದರು. ಸುಮಾರು ಹದಿಮೂರು ದಿನಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಡಿದ ವಿದ್ಯಾರ್ಥಿನಿ ಡಿಸೆಂಬರ್‌್ 29ರಂದು ಸಿಂಗಪುರದ ಮೌಂಟ್‌ ಎಲಿಜಬೆತ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.

ಪ್ರಮುಖ ಘಟನೆಗಳು
*ಡಿಸೆಂಬರ್‌್ 16, 2012: ಚಲಿಸುತ್ತಿದ್ದ ಬಸ್‌ನಲ್ಲಿ ಪ್ಯಾರಾಮೆಡಿಕಲ್‌್ ವಿದ್ಯಾರ್ಥಿನಿ ಮೇಲೆ  ಸಾಮೂಹಿಕ ಅತ್ಯಾಚಾರ
*ಡಿಸೆಂಬರ್‌್ 23: ಪ್ರಕರಣದ ವಿಚಾರಣೆಗೆ  ದೆಹಲಿ ಹೈಕೋರ್ಟ್‌ನಿಂದ ತ್ವರಿತ ನ್ಯಾಯಾಲಯ ರಚನೆ
*ಡಿಸೆಂಬರ್‌್ 27: ಚಿಕಿತ್ಸೆಗಾಗಿ ವಿದ್ಯಾರ್ಥಿನಿ ಸಿಂಗಪುರಕ್ಕೆ ಸ್ಥಳಾಂತರ
*ಡಿಸೆಂಬರ್‌್ 29: ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ವಿದ್ಯಾರ್ಥಿನಿ
*ಸೆಪ್ಟೆಂಬರ್‌್ 13, 2013: ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯ
*ಮಾರ್ಚ್‌ 13, 2014: ಗಲ್ಲು ಶಿಕ್ಷೆ ಎತ್ತಿ ಹಿಡಿದ ದೆಹಲಿ ಹೈಕೋರ್ಟ್‌

‘ಲೈಫ್‌ ಆಫ್‌ ಪೈ’ ಪ್ರಭಾವ
* ‘ಅತ್ಯಾಚಾರಕ್ಕೆ ಒಳಗಾಗುವ ಮುನ್ನ ವಿದ್ಯಾರ್ಥಿನಿ ತನ್ನ ಗೆಳೆಯನ ಜತೆ  ‘‘ಲೈಫ್‌ ಆಫ್‌ ಪೈ’’ ಚಿತ್ರ ನೋಡಿದ್ದಳು. ಇದು ಅವಳ ಮೇಲೆ ಗಾಢ ಪ್ರಭಾವ ಬೀರಿತ್ತು. ಹಾಗಾಗಿ ಅವಳು ಕೊನೆ ಉಸಿರು ಇರುವವರೆಗೂ ಹೋರಾಟ ನಡೆಸಿದ್ದಳು’
* ‘ವಿದ್ಯಾರ್ಥಿನಿ ನೀಡಿದ್ದ ಮರಣ ಪೂರ್ವ ಹೇಳಿಕೆಗಳಲ್ಲಿ ಯಾವುದೇ ಗೊಂದಲ ಇರಲಿಲ್ಲ’
–ದೆಹಲಿ ಹೈಕೋರ್ಟ್‌
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.