ನವದೆಹಲಿ: ಚೀನಾದ ಸೇನೆ ಹಿಂದೆ ಸರಿದರೆ ಮಾತ್ರ ಭೂತಾನ್ನ ದೋಕ ಲಾ ಪ್ರದೇಶದಿಂದ ಭಾರತದ ಸೇನೆಯನ್ನು ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಭಾರತ ದೃಢವಾಗಿ ಹೇಳಿದೆ. ಆದರೆ ಬಿಕ್ಕಟ್ಟು ಪರಿಹಾರಕ್ಕೆ ರಾಜತಾಂತ್ರಿಕ ಮಾರ್ಗದ ಮೂಲಕ ಪ್ರಯತ್ನ ನಡೆಸಲಾಗುವುದು ಎಂದೂ ತಿಳಿಸಿದೆ.
ಚೀನಾ ಗಡಿ ಬಿಕ್ಕಟ್ಟು ಮತ್ತು ಕಾಶ್ಮೀರದ ಪರಿಸ್ಥಿತಿ ಬಗ್ಗೆ ವಿರೋಧ ಪಕ್ಷಗಳಿಗೆ ಮಾಹಿತಿ ನೀಡಲು ಕರೆದ ಸಭೆಯಲ್ಲಿ ಸರ್ಕಾರ ಈ ವಿಚಾರ ಹೇಳಿದೆ.
ರಾಜತಾಂತ್ರಿಕ ಮಾರ್ಗದ ಮೂಲಕ ಬಿಕ್ಕಟ್ಟು ಪರಿಹರಿಸುವ ಸರ್ಕಾರದ ಕ್ರಮಕ್ಕೆ ‘ಸಂಪೂರ್ಣ ಬೆಂಬಲ’ ಇದೆ ಎಂದು ವಿರೋಧ ಪಕ್ಷಗಳು ಹೇಳಿವೆ. ಇಡೀ ರಾಷ್ಟ್ರ ಒಗ್ಗಟ್ಟಾಗಿ ನಿಲ್ಲಬೇಕಾದ ಅಗತ್ಯ ಇದೆ ಎಂದೂ ತಿಳಿಸಿವೆ.
ದೋಕಲಾದಲ್ಲಿ ರಸ್ತೆ ನಿರ್ಮಾಣ ಯೋಜನೆ ಕೈಬಿಡಬೇಕು ಮತ್ತು ಅಲ್ಲಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಚೀನಾಕ್ಕೆ ಸ್ಪಷ್ಟವಾಗಿ ತಿಳಿಸಲಾಗಿದೆ ಎಂಬುದನ್ನು ವಿರೋಧ ಪಕ್ಷಗಳ ಪ್ರತಿನಿಧಿಗಳಿಗೆ ರಕ್ಷಣಾ ಸಚಿವ ಅರುಣ್ ಜೇಟ್ಲಿ ತಿಳಿಸಿದರು.
ಭಾರತ–ಚೀನಾ–ಭೂತಾನ್ ಗಡಿ ಸಂಧಿಸುವ ಪ್ರದೇಶದಲ್ಲಿ ಜೂನ್ 16ಕ್ಕಿಂತ ಹಿಂದೆ ಇದ್ದ ಸ್ಥಿತಿಯನ್ನು ಸ್ಥಾಪಿಸಬೇಕು ಎಂದು ಚೀನಾವನ್ನು ಒತ್ತಾಯಿಸಲಾಗಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.