ನವದೆಹಲಿ: ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಮತ್ತು ಕೇಂದ್ರ ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಎಚ್.ಸಿ. ಗುಪ್ತಾ ಕಲ್ಲಿದ್ದಲು ಹಗರಣದಲ್ಲಿ ತಪ್ಪಿತಸ್ಥರು ಎಂದು ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಈ ಇಬ್ಬರಲ್ಲದೆ, ಜಾರ್ಖಂಡ್ನ ಮಾಜಿ ಮುಖ್ಯ ಕಾರ್ಯದರ್ಶಿ ಎ.ಕೆ. ಬಸು, ಖಾಸಗಿ ಕಂಪೆನಿ ವಿನಿ ಅಯರ್ನ್ ಎಂಡ್ ಸ್ಟೀಲ್ ಉದ್ಯೋಗ್ ಲಿ. (ವಿಸುಲ್) ಕೂಡ ಅಪರಾಧಿಗಳು ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಭರತ್ ಪರಾಶರ್ ಹೇಳಿದ್ದಾರೆ. ಜಾರ್ಖಂಡ್ನಲ್ಲಿರುವ ರಾಝರಾ ನಾರ್ಥ್ ಕಲ್ಲಿದ್ದಲು ನಿಕ್ಷೇಪವನ್ನು ಕೋಲ್ಕತ್ತದ ವಿಸುಲ್ಗೆ ಹಂಚಿಕೆ ಮಾಡುವಲ್ಲಿ ನಡೆದ ಅವ್ಯವಹಾರ ಮತ್ತು ಅಪರಾಧ ಒಳಸಂಚಿನಲ್ಲಿ ಇವರು ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಶಿಕ್ಷೆಯ ಪ್ರಮಾಣದ ಬಗ್ಗೆ ಗುರುವಾರ ವಿಚಾರಣೆ ನಡೆಯಲಿದೆ.
ಇತರ ಆರೋಪಿಗಳಾದ ವಿಸುಲ್ನ ನಿರ್ದೇಶಕ ವೈಭವ್ ತುಳಸಿಯಾನ್, ಅಧಿಕಾರಿಗಳಾದ ಬಸಂತ್ ಕುಮಾರ್ ಭಟ್ಟಾಚಾರ್ಯ ಮತ್ತು ಬಿಪಿನ್ ಬಿಹಾರಿ ಸಿಂಗ್ ಹಾಗೂ ಲೆಕ್ಕ ಪರಿಶೋಧಕ ನವೀನ್ ಕುಮಾರ್ ತುಳಸಿಯಾನ್ ಅವರನ್ನು ಖುಲಾಸೆಗೊಳಿಸಲಾಗಿದೆ.
ಕಲ್ಲಿದ್ದಲು ನಿಕ್ಷೇಪ ಮಂಜೂರು ಮಾಡಲು ಜಾರ್ಖಂಡ್ ಸರ್ಕಾರ ಅಥವಾ ಉಕ್ಕು ಸಚಿವಾಲಯವು ವಿಸುಲ್ ಹೆಸರನ್ನು ಶಿಫಾರಸು ಮಾಡಿರಲಿಲ್ಲ. ಆದರೆ ಪರಿಶೀಲನಾ ಸಮಿತಿಯ 36ನೇ ಸಭೆಯಲ್ಲಿ ಈ ಕಂಪೆನಿ ಹೆಸರನ್ನು ಶಿಫಾರಸು ಮಾಡಲಾಯಿತು ಎಂದು ಸಿಬಿಐ ವಾದಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.