ಹೈದರಾಬಾದ್ (ಐಎಎನ್ಎಸ್): ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಚಂಚಲಗುಡ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಕಡಪಾ ಸಂಸದ ಜಗನ್ ಮೋಹನ್ ರೆಡ್ಡಿ ಅವರನ್ನು ಮಂಗಳವಾರ ತಾಯಿ ವೈ. ಎಸ್. ವಿಜಯಮ್ಮ, ಪತ್ನಿ ಭಾರತಿ ಹಾಗೂ ಸಹೋದರಿ ಶರ್ಮಿಳಾ, ಭಾವ ಅನಿಲ್ ಕುಮಾರ್ ಸೇರಿದಂತೆ ಕುಟುಂಬದ ಇತರೆ ಸದಸ್ಯರು ಭೇಟಿ ಮಾಡಿದರು.
ಕಾರಾಗೃಹದಲ್ಲಿ ಜಗನ್ ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ಮಾತನಾಡಿದ ವಿಜಯಮ್ಮ ಅವರು, ಜೂನ್ 12 ರಂದು ಆರಂಭವಾಗಲಿರುವ ವಿಧಾನಸಭೆಯ ಉಪ ಚುನಾವಣೆಯ ಬಗ್ಗೆ ಚರ್ಚಿಸುವುದರೊಂದಿಗೆ ಜತೆಗೆ ಜಗನ್ ಬಂಧನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಸಹಾನುಭೂತಿ ದೊರೆಯುವ ಆಶಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇದೇ ಸಮಯದಲ್ಲಿ ಕೋರ್ಟ್ ಆದೇಶದಂತೆ ಜಗನ್ ಅವರಿಗೆ ವಿಶೇಷ ಶ್ರೇಣಿ ಅಡಿಯಲ್ಲಿ ವಿಶೇಷ ಕೊಠಡಿಯನ್ನು ಒದಗಿಸಲಾಯಿತು.
ವಿಶೇಷ ಕೊಠಡಿಯು ಒಂದು ಚಿಕ್ಕ ಅಡುಗೆ ಮನೆ, ಶೌಚಾಲಯ ಒಳಗೊಂಡಿದೆ. ಜಗನ್ ಸ್ವತಃ ಅಡಿಗೆ ತಯಾರಿಸಿಕೊಳ್ಳಲು ಸಹಾಯವಾಗುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
~ಕಾರಾಗೃಹದ ಜೀವನ ಜಗನ್ ಅವರಿಗೆ ಬೇಸರ ತಂದಿಲ್ಲ, ಅವರು ಆರೋಗ್ಯವಾಗಿದ್ದಾರೆ~ ಎಂದು ಜಗನ್ ನಿಕಟವರ್ತಿ ರಾಜಮೋಹನ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.