ನವದೆಹಲಿ,(ಐಎಎನ್ಎಸ್/ಪಿಟಿಐ): 2 ಜಿ ತರಂಗಾಂತರ ಹಗರಣದಲ್ಲಿ ತಿಹಾರ್ ಜೈಲು ಸೇರಿದ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ, ಶುಕ್ರವಾರ ಬೆಳಿಗ್ಗೆ ಹಾಜರಾತಿಗಾಗಿ ಎಲ್ಲರಂತೆಯೇ ಸರದಿಯಲ್ಲಿ ನಿಂತರು.
ಒಂದು ಗಂಟೆ ಬಳಿಕ ಸೆರೆಮನೆ ಸಂಖ್ಯೆ 1ರ ಅತಿ ಗಣ್ಯ ವ್ಯಕ್ತಿ ವಾರ್ಡ್ನಲ್ಲಿ ಅವರು ಚಹಾ ಕುಡಿದು ಪತ್ರಿಕೆ ಓದಿದರು. ಮುಂದಿನ 14 ದಿನಗಳ ಕಾಲ ರಾಜಾ ಇಲ್ಲಿಯೇ ಇರಲಿದ್ದು, ಅವರಿಗೆ ಯಾವುದೇ ರೀತಿಯ ಅತಿ ಗಣ್ಯ ವ್ಯಕ್ತಿಯ ಉಪಚಾರವನ್ನು ನೀಡಲಾಗುತ್ತಿಲ್ಲ ಎಂದು ಸೆರೆಮನೆಗಳು ಅಧಿಕಾರಿಗಳು ತಿಳಿಸಿದ್ದಾರೆ.
‘ರಾಜಾ ಅವರು ಬೆಳಿಗ್ಗೆ 6 ಗಂಟೆಗೆ ಎದ್ದು ಇತರರಂತೆ ಹಾಜರಾತಿಗಾಗಿ ಸರದಿಯಲ್ಲಿ ನಿಂತುಕೊಂಡರು. ಅವರಿಗೆ ಸರಿಯಾಗಿ 7 ಗಂಟೆಗೆ ಚಹಾ ನೀಡಲಾಯಿತು. ಬಳಿಕ ಅವರು ಓದಲು ಪತ್ರಿಕೆ ಕೇಳಿದರು’ ಎಂದು ಸೆರೆಮನೆ ವಕ್ತಾರ ಸುನಿಲ್ ಗುಪ್ತಾ ತಿಳಿಸಿದರು.ಸುರಕ್ಷತೆಯ ದೃಷ್ಟಿಯಿಂದ ಅವರನ್ನು ವಿಐಪಿ ವಾರ್ಡ್ನಲ್ಲಿರಿಸಲಾಗಿದೆ ಎಂದು ಅವರು ತಿಳಿಸಿದರು.
ಬಲ್ವಾ ಜೈಲಿಗೆ
ನವದೆಹಲಿ,(ಪಿಟಿಐ) 2ಜಿ ಸ್ಪೆಕ್ಟ್ರಂ ಹಗರಣದ ಆರೋಪಿ ಮಾಜಿ ದೂರಸಂಪರ್ಕ ಸಚಿವ ಎ.ರಾಜಾ, ತಿಹಾರ್ ಜೈಲಿಗೆ ತೆರಳಿದ ಮಾರನೇ ದಿನವೇ ಪ್ರಕರಣದ ಇನ್ನೋರ್ವ ಆರೋಪಿ ಶಾಹಿದ್ ಉಸ್ಮಾನ್ ಬಲ್ವಾ ಅವರನ್ನು ಶುಕ್ರವಾರ ತಿಹಾರ್ ಜೈಲಿಗೆ ಕಳುಹಿಸಲಾಯಿತು.
ಸಿಬಿಐ ವಿಶೇಷ ನ್ಯಾಯಾಧೀಶರಾದ ಒ.ಪಿ.ಸೈನಿ ಅವರು ಬಲ್ವಾ ಅವರಿಗೆ ಮಾರ್ಚ್ 3ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಬಲ್ವಾ ಇದುವರೆಗೆ ಸಿಬಿಐ ಬಂಧನದಲ್ಲಿದ್ದರು. ಬಲ್ವಾ ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವುದರಿಂದ ಸೆರೆಮನೆಯಲ್ಲಿ ಅವರಿಗೆ ವಿಶೇಷ ಹಾಸಿಗೆ ಹಾಗೂ ಮನೆ ಆಹಾರವನ್ನು ನೀಡಬೇಕೆಂಬ ಅವರ ವಕೀಲರ ಕೋರಿಕೆಯನ್ನು ಪರಿಗಣಿಸುವಂತೆ ನ್ಯಾಯಾಲಯ ಸೆರೆಮನೆ ಅಧಿಕಾರಿಗಳಿಗೆ ಆದೇಶಿಸಿದೆ. ತರಂಗಾಂತರ ಹಗರಣಕ್ಕೆ ಸಂಬಂಧಿಸಿ ಫೆ. 8ರಂದು ಮುಂಬೈಯಲ್ಲಿ ಬಲ್ವಾ ಅವರನ್ನು ಬಂಧಿಸಿ ದೆಹಲಿಗೆ ಕರೆತರಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.