ADVERTISEMENT

ದಕ್ಷಿಣದಲ್ಲಿ ಹಿಂಗಾರು ಶುರು

ತಮಿಳುನಾಡು ಪ್ರವೇಶಿಸಿದ ಈಶಾನ್ಯ ಮಾರುತ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 20:14 IST
Last Updated 27 ಅಕ್ಟೋಬರ್ 2017, 20:14 IST
ದಕ್ಷಿಣದಲ್ಲಿ ಹಿಂಗಾರು ಶುರು
ದಕ್ಷಿಣದಲ್ಲಿ ಹಿಂಗಾರು ಶುರು   

ಚೆನ್ನೈ: ನೈರುತ್ಯ ಮುಂಗಾರು ನಿರ್ಗಮನದ ಬಳಿಕ ಒಂದು ವಾರ ವಿಳಂಬವಾಗಿ ಬಹು ನಿರೀಕ್ಷಿತ ಈಶಾನ್ಯ ಮಾರುತಗಳು ಶುಕ್ರವಾರ ದಕ್ಷಿಣ ರಾಜ್ಯಗಳನ್ನು ಪ್ರವೇಶಿಸಲಿವೆ.

ತಮಿಳುನಾಡು ಮತ್ತು ಈ ರಾಜ್ಯಕ್ಕೆ ಹೊಂದಿಕೊಂಡಿರುವ ಕೇರಳ, ಆಂಧ್ರ ಪ್ರದೇಶದ ದಕ್ಷಿಣ ಕರಾವಳಿ, ರಾಯಲಸೀಮಾ ಮತ್ತು ಕರ್ನಾಟಕದ ದಕ್ಷಿಣ ಒಳನಾಡಿಗೆ ಈಶಾನ್ಯ ಮಾರುತಗಳು ಹಿಂಗಾರು ಮಳೆಯನ್ನು ಹೊತ್ತು ತರಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಬಂಗಾಳ ಕೊಲ್ಲಿಯಿಂದ ತಮಿಳುನಾಡು, ಪುದುಚೇರಿ ಕರಾವಳಿಯ ಮೂಲಕ ದಕ್ಷಿಣ ರಾಜ್ಯಗಳನ್ನು ಪ್ರವೇಶಿಸಲಿರುವ ಈಶಾನ್ಯ ಮಾರುತಗಳು ಬಿರುಗಾಳಿ, ಗುಡುಗು ಸಹಿತ ಮಳೆ ಹೊತ್ತು ತರಲಿವೆ.

ADVERTISEMENT

ತಮಿಳುನಾಡಿನ ಉತ್ತರ ಭಾಗದಲ್ಲಿ ಗುರುವಾರ ಸಂಜೆಯಿಂದಲೇ ಗುಡುಗು ಸಹಿತ ಮಳೆ ಆರಂಭವಾಗಿದೆ.

ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು, ಪುದುಚೇರಿ ಮತ್ತು ಕೇರಳದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 24 ಗಂಟೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಬಂಗಾಳ ಕೊಲ್ಲಿಯಿಂದ ಗಂಟೆಗೆ 45ರಿಂದ 55 ಕಿ.ಮೀ ವೇಗದಲ್ಲಿ ಭಾರಿ ಬಿರುಗಾಳಿ ಪುದುಚೇರಿ ಮತ್ತು ತಮಿಳುನಾಡು ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆಯ ಉಪ ಮಹಾ ನಿರ್ದೇಶಕ ಡಾ. ಎಸ್‌.ಬಾಲಚಂದ್ರನ್‌ ತಿಳಿಸಿದ್ದಾರೆ.

ತಮಿಳುನಾಡು ಹಿಂಗಾರಿನ ಮೇಲೆ ಅವಲಂಬಿತವಾಗಿದ್ದು, ಈಶಾನ್ಯ ಮಾರುತಗಳು ವಾರ್ಷಿಕ ಶೇ 48ರಷ್ಟು ಮಳೆ ಸುರಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.