ADVERTISEMENT

ದುಷ್ಕರ್ಮಿಗಳಿಂದ ಅಧಿಕಾರಿ ಸಜೀವ ದಹನಕ್ಕೆ ಯತ್ನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ಲಖನೌ: ಉತ್ತರ ಪ್ರದೇಶದ ಲಖಿಮ್‌ಪುರ ಖೇರಿ ಜಿಲ್ಲೆಯಲ್ಲಿ ಕಲಬೆರಕೆ ಪೆಟ್ರೊಲ್ ಮಾರಾಟಕ್ಕೆ ಅಂಕುಶ ಹಾಕಿದ ಭಾರತೀಯ ತೈಲ ನಿಗಮದ ಅಧಿಕಾರಿ ಎಸ್.ಮಂಜುನಾಥ್ ಅವರನ್ನು ಸಜೀವವಾಗಿ ದಹನ ಮಾಡಿದ ದಾರುಣ ಘಟನೆ ಮರೆಯುವ ಮುನ್ನವೇ ರಾಜ್ಯದ ಬುಡಾನ್ ಜಿಲ್ಲೆಯಲ್ಲಿ ಮತ್ತೊಬ್ಬ ಅಧಿಕಾರಿಯ ಮೇಲೆ ತೈಲ ಮಾಫಿಯಾ ದಾಳಿ ನಡೆಸಿದ್ದು ಅವರನ್ನೂ ಸಜೀವವಾಗಿ ಹತ್ಯೆ ಮಾಡಲು ಯತ್ನಿಸಿದೆ.

ಬುಡಾನ್ ಜಿಲ್ಲಾ ತೈಲ ವಿತರಣಾ ಅಧಿಕಾರಿ ನೀರಜ್ ಸಿಂಗ್ ತೈಲ ಮಾಫಿಯಾದವರು ನಡೆಸಿದ ದಾಳಿಯಿಂದ ಪಾರಾಗಿದ್ದು, ಅವರ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ. ಬುಡಾನ್ ಜಿಲ್ಲೆಯ ದಹೇಗಾಂವ್ ಎಂಬಲ್ಲಿ ಕಲಬೆರಕೆ ಸೀಮೆ ಎಣ್ಣೆ ಮಾರಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಇತರೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿದ್ದ ಸಿಂಗ್ ಅವರ ಮೇಲೆ ಮಾರಾಟಗಾರ ಗಿರಿಶ್ ಚಂದ್ರ ಹಾಗೂ ಆತನ ಕಡೆಯವರಿಂದ ದಾಳಿ ನಡೆದಿದೆ.
 
ನೀರಜ್ ಸಿಂಗ್ ಅವರ ಕಾರಿನ ಕಿಟಕಿಗಳನ್ನು ಒಡೆದ ದುಷ್ಕರ್ಮಿಗಳು ನಂತರ ಸೀಮೆಎಣ್ಣೆ ಸುರಿದು ಅವರನ್ನು ಕೊಲ್ಲಲು ಯತ್ನಿಸಿದರಾದರೂ ಅವರಿಂದ ಪಾರಾಗಿಬಂದ ಸಿಂಗ್ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆಯ ಸಂಬಂಧ ಸೀಮೆಎಣ್ಣೆ ಅಂಗಡಿ ಮಾಲೀಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಎಂಟು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎ.ಸಿ. ಶರ್ಮಾ ತಿಳಿಸಿದ್ದಾರೆ.

ಏಳು ವರ್ಷಗಳ ಹಿಂದೆ ಭಾರತೀಯ ತೈಲ ನಿಗಮದ ಅಧಿಕಾರಿ ಯಾಗಿದ್ದ ಕರ್ನಾಟಕದ ಮಂಜುನಾಥ್ ಅವರನ್ನು ಸಜೀವವಾಗಿ ದಹನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಅಲಹಾಬಾದ್ ಹೈಕೋರ್ಟ್ ಜೀವಾವಧಿ ಶಿಕ್ಷೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.