ADVERTISEMENT

ದೆಹಲಿಯಲ್ಲಿ ರಾಜಾ ಎದುರು ವಿಚಾರಣೆ: ಎರಡು ದಿನಗಳ ಸಿಬಿಐ ವಶಕ್ಕೆ ಬಲ್ವಾ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 18:30 IST
Last Updated 9 ಫೆಬ್ರುವರಿ 2011, 18:30 IST

ಮುಂಬೈ (ಪಿಟಿಐ): 2 ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಬಂಧಿತರಾಗಿರುವ ಸ್ವಾನ್ ಟೆಲಿಕಾಂನ ಸ್ಥಾಪಕ ಶಾಹಿದ್ ಉಸ್ಮಾನ್ ಬಲ್ವಾ ಅವರನ್ನು ಎರಡು ದಿನಗಳ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ಯಲು ಮುಂಬೈ ನ್ಯಾಯಾಲಯ ಸಿಬಿಐಗೆ ಅನುಮತಿ ನೀಡಿದೆ.ಮಂಗಳವಾರ ಸಂಜೆ ಬಾಂದ್ರಾದ ತಮ್ಮ ನಿವಾಸದಲ್ಲಿ ಸಿಬಿಐ ಅಧಿಕಾರಿಗಳಿಂದ ಬಂಧಿತರಾದ ಬಲ್ವಾ ಅವರನ್ನು ಸಿಬಿಐ ವಿಶೇಷ ನ್ಯಾಯಾಧೀಶ ಎಸ್.ಸಿ.ಚಂದಕ್ ಅವರ ಮುಂದೆ ಹಾಜರುಪಡಿಸಿ, ಎರಡು ದಿನಗಳ ಕಾಲ ತಮ್ಮ ವಶಕ್ಕೆ ಒಪ್ಪಿಸಿ ನಂತರ ದೆಹಲಿ ನ್ಯಾಯಾಲಯದಲ್ಲಿ ಹಾಜರುಪಡಿಸಲು ಅನುಮತಿ ಕೋರಿತ್ತು. ಸಿಬಿಐ ದೆಹಲಿಯಲ್ಲಿ ಮಾಜಿ ಸಚಿವ ಎ.ರಾಜಾ ಅವರ ಮುಂದೆಯೇ ಬಲ್ವಾ ಅವರನ್ನು ವಿಚಾರಣೆಗೊಳಪಡಿಸಲಿದೆ.

ಬಲ್ವಾ ಪರ ವಕೀಲರು, ಹಗರಣದಲ್ಲಿ ಬೇರೆ ಬೇರೆ ಕಂಪೆನಿಗಳು ಭಾಗಿಯಾಗಿದ್ದರೂ ಬಲ್ವಾ ಅವರನ್ನು ಬಲಿಪಶುವನ್ನಾಗಿಸಲಾಗುತ್ತಿದೆ ಎಂದು ವಾದಿಸಿದರು. ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ಸಿಬಿಐ ಪರ ವಕೀಲರು ಬಲ್ವಾ 1,537 ಕೋಟಿ ರೂಪಾಯಿಗಳಿಗೆ ಪರವಾನಗಿ ಪಡೆದು ಅದನ್ನು ಯುಎಇ ಮೂಲದ ಎಟಿಸಲಾಟ್ ಎಂಬ ಕಂಪೆನಿಗೆ 4,200 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದರು ಎಂಬ ಮಾಹಿತಿಯನ್ನು ಕೋರ್ಟ್‌ಗೆ ನೀಡಿದರು.

ಸಿಬಿಐ ವಶದಲ್ಲಿರುವ ಮಾಜಿ ಸಚಿವ ಎ.ರಾಜಾ ಮತ್ತು ಬಲ್ವಾ ಅವರನ್ನು ಪರಸ್ಪರ ಅಭಿಮುಖವಾಗಿ ವಿಚಾರಣೆ ನಡೆಸುವ ಅಗತ್ಯವಿದ್ದು, ಇದರಿಂದ ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆಗಳಿವೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.ರಾಜಾ ಅವರಿಗೆ ಆಪ್ತನಾಗಿದ್ದ ಬಲ್ವಾ, 2 ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ದೊರಕಿದ ಅಕ್ರಮ ಹಣವನ್ನು ರಿಯಲ್ ಎಸ್ಟೇಟ್ ಉದ್ದಿಮೆಗಳಲ್ಲಿ ತೊಡಗಿಸಲು ಸಹಾಯ ಮಾಡಿದ್ದನು. ಇದರ ಬಗ್ಗೆ ಸಿಬಿಐ ಆದಾಯ ತೆರಿಗೆ ಇಲಾಖೆಯಿಂದ ಹಲವು ಸಾಕ್ಷ್ಯಗಳನ್ನು ಸಂಪಾದಿಸಿದೆ ಎಂದು ಮೂಲಗಳು ತಿಳಿಸಿವೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.