ADVERTISEMENT

ದೆಹಲಿಯಲ್ಲಿ ಲೆಹರ್‌ ರಾಯಭಾರ

ಬಿಜೆಪಿಗೆ ಬಿಎಸ್‌ವೈ ಮರು ಸೇರ್ಪಡೆ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 19:59 IST
Last Updated 18 ಸೆಪ್ಟೆಂಬರ್ 2013, 19:59 IST
ಲೇಹರ್‌ ಸಿಂಗ್‌
ಲೇಹರ್‌ ಸಿಂಗ್‌   

ನವದೆಹಲಿ: ಬಿಜೆಪಿ ತ್ಯಜಿಸಿ ‘ಕರ್ನಾಟಕ ಜನತಾ ಪಕ್ಷ’ (ಕೆಜೆಪಿ) ಸ್ಥಾಪಿಸಿರುವ ಯಡಿಯೂರಪ್ಪ ಅವರನ್ನು ಮಾತೃ ಪಕ್ಷಕ್ಕೆ ಮರಳಿ ಕರೆತರುವ ಪ್ರಯತ್ನಕ್ಕೆ ಮತ್ತೆ ಚಾಲನೆ ದೊರೆತಿದೆ. ಅವರ ಮರು ಪ್ರವೇಶಕ್ಕೆ ರಾಜ್ಯ ಬಿಜೆಪಿ ಹಸಿರು ನಿಶಾನೆ’ ತೋರಿದೆ.

ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ‘ಪ್ರಧಾನಿ ಅಭ್ಯರ್ಥಿ’ ಎಂದು ಘೋಷಿಸಿದ ಬಳಿಕ ಬಿಜೆಪಿಗೆ ಮರಳಲು ತುದಿಗಾಲಲ್ಲಿ ನಿಂತಿರುವ ಯಡಿಯೂರಪ್ಪ ಈ ಸಂಬಂಧ ವರಿಷ್ಠರ ಜತೆ ಮಾತುಕತೆ ನಡೆಸಲು ತಮ್ಮ ಆಪ್ತರಾದ ವಿಧಾನ ಪರಿಷತ್‌ ಸದಸ್ಯ ಲೇಹರ್‌ ಸಿಂಗ್‌ ಅವರನ್ನು  ದೆಹಲಿಗೆ ಕಳುಹಿಸಿದ್ದಾರೆ.

ಯಡಿಯೂರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆತರಲು ಮೋದಿ ಸೇರಿದಂತೆ ಕೆಲವು ನಾಯಕರು ಒಲವು ತೋರಿದ್ದಾರೆ. ಹಿರಿಯ ನಾಯಕ ಅಡ್ವಾಣಿ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರನ್ನು ಒಪ್ಪಿಸುವುದು ಹೇಗೆ ಎಂಬ ಚಿಂತನೆ ನಡೆಯುತ್ತಿದೆ.

ಕೆಜೆಪಿ ವಿಲೀನ ವಿಷಯ ಕುರಿತು ಪರಿಶೀಲಿಸಿ ಅಗತ್ಯ ಶಿಫಾರಸು ಮಾಡುವ ಜವಾಬ್ದಾರಿಯನ್ನು ಬಿಜೆಪಿ ಅಧ್ಯಕ್ಷ ರಾಜನಾಥ್‌ಸಿಂಗ್‌ ಅವರು ಅರುಣ್‌ ಜೇಟ್ಲಿ ಅವರಿಗೆ ವಹಿಸಿದ್ದಾರೆ. ಜೇಟ್ಲಿ ವರದಿ ಆಧರಿಸಿ ಪಕ್ಷ ತೀರ್ಮಾನ ಮಾಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅನಂತ್‌ ತಕರಾರಿಲ್ಲ: ಯಡಿಯೂರಪ್ಪನವರ ಕಡು ರಾಜಕೀಯ ವೈರಿಯಾದ ಅನಂತ ಕುಮಾರ್‌ ತಮ್ಮ ನಿಲುವು ಸಡಿಲಗೊಳಿಸಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತಾವು ಗೆಲುವು ಸಾಧಿಸಲು ಬಿಎಸ್‌ವೈ ಬೆಂಬಲ ಅಗತ್ಯ ಎಂಬ ನಿಲುವಿಗೆ ಬಂದಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.