ADVERTISEMENT

ದೇವರ ಮೆರವಣಿಗೆಗಾಗಿ ಕಾರ್ಯಾಚರಣೆ ಸ್ಥಗಿತಗೊಳಿಸುವ ವಿಮಾನ ನಿಲ್ದಾಣ!

ಪಿಟಿಐ
Published 27 ಅಕ್ಟೋಬರ್ 2017, 10:03 IST
Last Updated 27 ಅಕ್ಟೋಬರ್ 2017, 10:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ದೇವರ ಮೆರವಣಿಗೆ ಸಾಗಲು ದಾರಿ ಮಾಡಿಕೊಡುವ ಉದ್ದೇಶದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತವು ರನ್‌ವೇ ಕಾರ್ಯನಿರ್ವಹಣೆಯನ್ನೇ ಸ್ಥಗಿತಗೊಳಿಸುವುದನ್ನು ಎಲ್ಲಾದರೂ ಕೇಳಿದ್ದೀರಾ?

ಬಹುಶಃ ವಿಶ್ವದಲ್ಲೇ ಇಂಥದ್ದೊಂದು ಕ್ರಮ ಅನುಸರಿಸುತ್ತಿರುವ ಮೊದಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿರಬೇಕು ತಿರುವನಂತಪುರದ ವಿಮಾನ ನಿಲ್ದಾಣ. ಇಲ್ಲಿ ವರ್ಷದಲ್ಲಿ ಎರಡು ಬಾರಿ ದೇವರ ಮೆರವಣಿಗೆಗೆಂದು ಐದು ಗಂಟೆಗಳ ಕಾಲ ರನ್‌ವೇ ಕಾರ್ಯನಿರ್ವಹಣೆ ಸ್ಥಗಿತಗೊಳಿಸಲಾಗುತ್ತದೆ.

ಇಲ್ಲಿನ ಅನಂತಪದ್ಮನಾಭ ದೇಗುಲದಲ್ಲಿ ನಡೆಯುವ 10 ದಿನಗಳ ಜಾತ್ರೆಯ ಕೊನೆಯ ದಿನ ರನ್‌ವೇ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುತ್ತದೆ. ಆ ದಿನ ‘ಆರಾಟ್ಟು’ ಮಹೋತ್ಸವ (ದೇಗುಲದ ವಿಗ್ರಹಗಳ ಧಾರ್ಮಿಕ ಸ್ನಾನ ಕಾರ್ಯಕ್ರಮ) ನಡೆಯುತ್ತದೆ. ಇದಕ್ಕಾಗಿ ವಿಗ್ರಹಗಳನ್ನು ಶಾನ್‌ಗುಮುಘಮ್ ಬೀಚ್‌ಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಅರ್ಚಕರು, ತಿರುವಾಂಕೂರು ರಾಜಮನೆತನದವರು, ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದು ವಿಮಾನ ನಿಲ್ದಾಣದ ರನ್‌ವೇ ಮೂಲಕ ಹಾದುಹೋಗುತ್ತದೆ.

ADVERTISEMENT

ರನ್‌ವೇ ಕಾರ್ಯಾಚರಣೆ ಸ್ಥಗಿತಗೊಳಿಸುವ ಬಗ್ಗೆ ಒಂದು ವಾರ ಮೊದಲೇ ವಿಮಾನ ನಿಲ್ದಾಣದ ಆಡಳಿತವು ನೋಟಮ್ (ನೊಟೀಸ್ ಟು ಆ್ಯರ್‌ಮೆನ್) ಎಂಬ ನೋಟಿಸ್‌ ಹೊರಡಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಸಂಜೆ 4 ಗಂಟೆಗೆ ಕಡಲ ಕಿನಾರೆಗೆ ಸಾಗುವ ಮೆರವಣಿಗೆ ರಾತ್ರಿ 9 ಗಂಟೆಗೆ ‘ದೀವಟಿಕೆ’ಯೊಂದಿಗೆ ವಾಪಸಾಗುತ್ತದೆ. ನಂತರ ರನ್‌ವೇಯನ್ನು ಕಾರ್ಯಾಚರಣೆಗೆ ಮುಕ್ತಗೊಳಿಸಲಾಗುತ್ತದೆ.

ಅನಂತಪದ್ಮನಾಭ ದೇಗುಲದ ಆಡಳಿತ ಮಂಡಳಿಯವರು ಹೇಳುವ ಪ್ರಕಾರ, ರನ್‌ವೇ ಇರುವ ಪ್ರದೇಶವು ಶತಮಾನಗಳಿಂದ ‘ಆರಾಟ್ಟು’ ಮೆರವಣಿಗೆಯ ಹಾದಿಯಾಗಿದೆ. 1932ರಲ್ಲಿ ಆ ಪ್ರದೇಶದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಿತ್ತು. ಆದರೆ, ಅದಕ್ಕೂ ಮೊದಲೇ ಆ ಜಾಗದಲ್ಲಿ ಮೆರವಣಿಗೆ ಸಾಗುತ್ತಿತ್ತು.

‘ಆರಾಟ್ಟು’ಉತ್ಸವದಲ್ಲಿ ಭಾಗಿಯಾಗುವವರಿಗೆ ವಿಶೇಷ ಪಾಸ್‌ಗಳನ್ನೂ ನೀಡಲಾಗುತ್ತದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ. ರನ್‌ವೇ ಪ್ರದೇಶದಲ್ಲಿ ಮೆರವಣಿಗೆ ಹಾದುಹೋಗುವಾಗ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಯೋದರು ಭದ್ರತೆ ಒದಗಿಸುತ್ತಾರೆ.

‘ಇಂಥ ಪದ್ಧತಿ ವಿಶ್ವದ ಇತರ ಯಾವುದೇ ಭಾಗದ ವಿಮಾನ ನಿಲ್ದಾಣದಲ್ಲಿ ಅನುಸರಿಸುವ ಬಗ್ಗೆ ನಮಗೆ ಮಾಹಿತಿ ಇಲ್ಲ’ ಎಂದಿದ್ದಾರೆ ತಿರುವನಂತಪುರ ವಿಮಾನ ನಿಲ್ದಾಣದ ನಿರ್ದೇಶಕ ಜಾರ್ಜ್‌ ಜಿ. ತಾರಕನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.