ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟಿನ ಉನ್ನತಾಧಿಕಾರ ಸಮಿತಿ ಸೂಚಿಸಿದ್ದ ಮೂವರು ನ್ಯಾಯಮೂರ್ತಿಗಳನ್ನ ನೇಮಕ ಮಾಡುವುದು ಕೇಂದ್ರ ಸರ್ಕಾರಕ್ಕೆ ಅನಿವಾರ್ಯವಾಗಿದೆ.
ಸಮಿತಿ ಶಿಫಾರಸು ಪುನರ್ಪರಿಶೀಲಿಸುವಂತೆ ಸರ್ಕಾರ ಮಾಡಿದ್ದ ಮನವಿಯನ್ನು ಸಮಿತಿ ತಿರಸ್ಕರಿಸಿರುವುದು ಇದಕ್ಕೆ ಕಾರಣ.`ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳ ಉನ್ನತ ಸಮಿತಿ ಈ ಮೂರು ನ್ಯಾಯಮೂರ್ತಿಗಳ ನೇಮಕದ ಹಿಂದಿನ ಉದ್ದೇಶವನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದೆ' ಎಂದು ಕೇಂದ್ರ ಕಾನೂನು ಸಚಿವಾಲಯದ ಮೂಲಗಳು ತಿಳಿಸಿವೆ.
ಕರ್ನಾಟಕ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿ ವಿಕ್ರಮಜಿತ್ ಸೇನ್, ಒಡಿಶಾ ಮುಖ್ಯ ನ್ಯಾಯಮೂರ್ತಿ, ಕರ್ನಾಟಕದ ವಿ.ಗೋಪಾಲಗೌಡ ಹಾಗೂ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂ.ವೈ.ಇಕ್ಬಾಲ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಿಸುವಂತೆ ಸುಪ್ರೀಂ ಕೋರ್ಟ್ ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿತ್ತು.
65 ರವರೆಗೂ ಅವಕಾಶ
ಬೆಂಗಳೂರು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರ ಹೆಸರು ಅಂತಿಮಗೊಂಡಿರುವ ಕಾರಣ, ಸೇನ್ ಅವರಿಗೆ ಇನ್ನೂ ಮೂರು ವರ್ಷಗಳ ಸೇವಾವಧಿ ದೊರೆಯಲಿದೆ. ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 62 ವರ್ಷ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಇದು 65 ವರ್ಷ. ನ್ಯಾ. ಸೇನ್ ಅವರ ಸೇವಾವಧಿ ಇದೇ 31ಕ್ಕೆ ಅಂತ್ಯಗೊಳ್ಳಲಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.