ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಭಾನುವಾರ ಮರಣೋತ್ತರ ಪರೀಕ್ಷೆ ನಡೆದಿದ್ದು, ಇದು ಆತ್ಮಹತ್ಯೆ ಎಂದು ಪೊಲೀಸರು ಹೇಳಿದ್ದಾರೆ.
ನೇಣು ಬಿಗಿದು ಉಸಿರುಗಟ್ಟುವಿಕೆಯಿಂದ ಮರಣ ಸಂಭವಿಸಿದ್ದು, ಇದು ಆತ್ಮಹತ್ಯೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹೇಳಲಾಗಿದೆ. ಪ್ರಸ್ತುತ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖಾ ತಂಡಕ್ಕೆ ವಹಿಸಿದೆ ಎಂದು ಪುರುಲಿಯಾದ ಪೊಲೀಸ್ ವರಿಷ್ಠಾಧಿಕಾರಿ ಆಕಾಶ್ ಮೆಘರಿಯಾ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಮೂರು ದಿನಗಳ ಅವಧಿಯಲ್ಲಿ ದುಲಾಲ್ ಕುಮಾರ್ ಮತ್ತು ತ್ರಿಲೋಚನ್ ಮಹತೊ ಎಂಬ ಯುವಕರ ಮೃತದೇಹ ಅನುಮಾನಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ತಮ್ಮ ಕಾರ್ಯಕರ್ತರನ್ನು ಆಡಳಿತರೂಢ ತೃಣಮೂಲ ಕಾಂಗ್ರೆಸ್ ಹತ್ಯೆ ಮಾಡಿದೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದ ಬಿಜೆಪಿ ಭಾನುವಾರ ಬಂದ್ಗೆ ಕರೆ ನೀಡಿತ್ತು.
ದುಲಾಲ್ ಕುಮಾರ್ ಎಂಬವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಬಲರಾಂಪುರದಲ್ಲಿ ಪತ್ತೆಯಾಗಿತ್ತು. ದುಲಾಲ್ ಶುಕ್ರವಾರ ನಾಪತ್ತೆಯಾಗಿದ್ದರು. ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ದುಲಾಲ್ಗೆ ಜೀವ ಬೆದರಿಕೆ ಬಂದಿತ್ತು. ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬರು ಕುಮಾರ್ ಅವರಲ್ಲಿ ಯಾವ ಪಕ್ಷದ ಪರ ಕೆಲಸ ಮಾಡುತ್ತಿದ್ದೀರಿ ಎಂದು ಕೇಳಿದ್ದರು. ಅದಕ್ಕೆ ಕುಮಾರ್ ಬಿಜೆಪಿ ಎಂದು ಉತ್ತರಿಸಿದಾಗ ಜೀವ ಬೆದರಿಕೆಯೊಡ್ಡಲಾಗಿದೆ ಎಂದು ಕುಮಾರ್ ಸಹೋದರ ಹೇಳಿದ್ದಾರೆ.
ಆದಾಗ್ಯೂ ಈ ಎರಡು ಪ್ರಕರಣದಲ್ಲಿ ನಮ್ಮ ಕೈವಾಡ ಇಲ್ಲ, ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದುದು ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.