ADVERTISEMENT

ಪಶ್ಚಿಮ ಬಂಗಾಳದ ಬಸೀರ್ಹತ್‍‌‍ಗೆ ಭೇಟಿ ನೀಡಲು ಮುಂದಾಗಿದ್ದ ರಾಜಕಾರಣಿಗಳ ಬಂಧನ

ಏಜೆನ್ಸೀಸ್
Published 7 ಜುಲೈ 2017, 11:32 IST
Last Updated 7 ಜುಲೈ 2017, 11:32 IST
ಕೃಪೆ: ಪಿಟಿಐ
ಕೃಪೆ: ಪಿಟಿಐ   

ಕೊಲ್ಕತ್ತ:  ಪಶ್ಚಿಮ ಬಂಗಾಳದಲ್ಲಿ ಎರಡು ದಿನಗಳ ಹಿಂದೆ ಕೋಮು ಸಂಘರ್ಷ ಸಂಭವಿಸಿದ್ದ ಬಸೀರ್ಹತ್‍ಗೆ ಭೇಟಿ ನೀಡಲು ಮುಂದಾಗಿದ್ದ  ರಾಜಕಾರಣಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಫೇಸ್‍ಬುಕ್‍ನಲ್ಲಿ ಪ್ರಕಟವಾಗಿದ್ದ ಆಕ್ಷೇಪಾರ್ಹ ಬರಹವೊಂದು ಬಾಂಗ್ಲಾದೇಶ್ ಗಡಿ ಪ್ರದೇಶದಿಂದ 12 ಕಿಮೀ ದೂರದಲ್ಲಿರುವ ಬಸೀರ್ಹತ್‍ನಲ್ಲಿ ಕೋಮುಗಲಭೆ ಸಂಭವಿಸಲು ಕಾರಣವಾಗಿತ್ತು.

ನಡೆದದ್ದೇನು? ಗುರುವಾರ ಮಧ್ಯಾಹ್ನ ಹಿಂದೂಗಳ ಗುಂಪು ಮತ್ತು ಪೊಲೀಸರ ನಡುವೆ ಸಂಘರ್ಷವೇರ್ಪಟ್ಟಿತ್ತು. ಇದಾದ ನಂತರ ಹಿಂದೂಗಳ ಗುಂಪು ಅಲ್ಪಸಂಖ್ಯಾತರ ಮನೆ ಮತ್ತು ಅಂಗಡಿಗಳ ಮೇಲೆ ದಾಂಧಲೆ ನಡೆಸಿತ್ತು. ಸಂಜೆಯ ವೇಳೆ ಈ ಸಂಘರ್ಷ ಮತ್ತಷ್ಟು ತೀವ್ರಗೊಂಡಿತ್ತು.

ADVERTISEMENT

ಗುರುವಾರ ರಾತ್ರಿ 8ಗಂಟೆಗೆ ಹಿಂದೂಗಳ ಪ್ರಾಬಲ್ಯವಿರುವ ಬಿಸೀರ್ಹತ್ ನಗರಕ್ಕೆ ಪೊಲೀಸ್ ಭದ್ರತೆ ಕಲ್ಪಿಸಿದೆ. ಹಿಂದೂಗಳ ಮನೆಗಳ ಮೇಲೆ ಮುಸ್ಲಿಮರು ದಾಳಿ ನಡೆಸದಂತೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.

ರಾಜಕಾರಣಿಗಳ ಭೇಟಿಗೆ ತಡೆ

ಕೋಮು ಗಲಭೆಯೇರ್ಪಟ್ಟಿದ್ದ ಬಸೀರ್ಹತ್‍ಗೆ ಭೇಟಿ ನೀಡಲು ಮುಂದಾಗಿದ್ದ ಬಿಜೆಪಿ ನೇತಾರೆ ರೂಪಾ ಗಂಗೂಲಿ ಮತ್ತು ಲೋಕೇತ್ ಚಟರ್ಜಿ ಅವರನ್ನು ಪೊಲೀಸರು ಶುಕ್ರವಾರ ಬೆಳಗ್ಗೆ ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ನಿನ್ನೆ ಇದೇ ಪ್ರದೇಶಕ್ಕೆ ಭೇಟಿ ನೀಡಲು ಮುಂದಾಗಿದ್ದ ಸಂಸದ ಮೊಹಮ್ಮದ್ ಸಲೀಂ ನೇತೃತ್ವದ ಎಡಪಕ್ಷದ ನಾಯಕರ ಗುಂಪು ಮತ್ತು ಕಾಂಗ್ರೆಸ್ ನಾಯಕರ ತಂಡವನ್ನು ಪೊಲೀಸ್ ತಡೆದಿತ್ತು.

ಶಾಂತಿ ನೆಲೆಸಿದೆ

ಗುರುವಾರ ರಾತ್ರಿ ಬಸೀರ್ಹತ್‍ನ ಸ್ಥಳೀಯರು ಮತ್ತು ಪೊಲೀಸ್ ಅಧಿಕಾರಿಗಳ ಜತೆ ಮಾತುಕತೆ ನಡೆದಿದ್ದು ಶುಕ್ರವಾರ ಪ್ರಸ್ತುತ ಪ್ರದೇಶದಲ್ಲಿ ಶಾಂತಿ ನೆಲೆಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ ಮೈತ್ರಾ ಬಗಾನ್, ಹರೀಶ್‍ಪುರ್, ರಘುನಾಥ್ ಪುರ್, ತ್ಯಂತ್ರಾ ಮತ್ತು ಬೈಬ್ಲಾ ಮೊದಲಾದ ಪ್ರದೇಶಗಳಲ್ಲಿ ಅಂಗಡಿಗಳು ತೆರೆದಿವೆ. ವಾಹನ ಸಂಚಾರವೂ ಆರಂಭವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕೋಮು ಸಂಘರ್ಷ ಆರಂಭವಾಗಿದ್ದ ಸ್ವರೂಪ್‍ನಗರ್ ಮತ್ತು ಬದೂರಿಯಾ ಎಂಬಲ್ಲಿಯೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.