ADVERTISEMENT

ಪ್ರಧಾನಿ ಹುದ್ದೆಯ ಘನತೆಯನ್ನು ಮೋದಿ ಮರಳಿ ತಂದಿದ್ದಾರೆ: ಅಮಿತ್ ಷಾ

ಪಿಟಿಐ
Published 17 ಜೂನ್ 2017, 14:40 IST
Last Updated 17 ಜೂನ್ 2017, 14:40 IST
ಪ್ರಧಾನಿ ಹುದ್ದೆಯ ಘನತೆಯನ್ನು ಮೋದಿ ಮರಳಿ ತಂದಿದ್ದಾರೆ: ಅಮಿತ್ ಷಾ
ಪ್ರಧಾನಿ ಹುದ್ದೆಯ ಘನತೆಯನ್ನು ಮೋದಿ ಮರಳಿ ತಂದಿದ್ದಾರೆ: ಅಮಿತ್ ಷಾ   

ಮುಂಬೈ: ಮಹಾರಾಷ್ಟ್ರದಲ್ಲಿ ಪಕ್ಷ ಸಂಘಟಿಸುವ ಉದ್ದೇಶದಿಂದ ಮೂರು ದಿನಗಳ ಭೇಟಿ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು ‘ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಯ ಘನತೆಯನ್ನು ಪ್ರಧಾನ ಮಂತ್ರಿಗಳ ಕಚೇರಿಗೆ ಮರಳಿ ತಂದಿದ್ದಾರೆ’ ಎಂದು ಹೇಳಿದ್ದಾರೆ.

‘ಸ್ವಾತಂತ್ರ ನಂತರದ ಭಾರತದಲ್ಲಿ ಮೋದಿಯವರು ಅತ್ಯಂತ ಪ್ರಬಲ ನಾಯಕರಾಗಿದ್ದಾರೆ’ ಎಂದ ಷಾ, ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿಯೊಬ್ಬ ಮಂತ್ರಿಯೂ ತಮ್ಮನ್ನು ತಾವು ಪ್ರಧಾನಿ ಎಂಬಂತೆಯೇ ಭಾವಿಸಿದ್ದರು. ಆದರೆ ಪ್ರಧಾನಿಯವರನ್ನು ಪ್ರಧಾನಿನ್ನಾಗಿ ಗೌರವಿಸಿರಲಿಲ್ಲ’ ಎಂದು ಕಾಂಗ್ರೆಸ್‌ ಸರ್ಕಾರವನ್ನು ಕುಟುಕಿದ್ದಾರೆ.

ಜತೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆ ಜಾರಿ ಬಗ್ಗೆ ಮಾತನಾಡಿರುವ ಅವರು, ‘ಈವರೆಗೆ ಮಸೂದೆ ಜಾರಿಮಾಡುವ ಧೈರ್ಯ ಮತ್ತು ಸಾಮರ್ಥ್ಯ ಯಾರಲ್ಲೂ ಇರಲಿಲ್ಲ. ಮೋದಿ ಅವರು ಭಾರತವನ್ನು 2022ರ 75ನೇ ಸ್ವಾತಂತ್ರೋತ್ಸವದ ವೇಳೆಗೆ ವಿಶ್ವದ ಶಕ್ತಿಶಾಲಿ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಸರ್ವ ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

ಸದ್ಯ ಭಾರತ, ಪ್ಯಾರಿಸ್‌ನ ಹವಾಮಾನ ಒಪ್ಪಂದದಂತಹ ಮಹತ್ವದ ವಿಚಾರಗಳಲ್ಲಿ ವಿಶ್ವ ನಾಯಕನಾಗಿ ಬದಲಾಗುತ್ತಿದೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

ರಾಷ್ಟ್ರಪತಿ ಚುನಾವಣೆ ಬಗ್ಗೆ ಮಾತನಾಡಿದ ಷಾ, ‘ನಾವು ನಮ್ಮ ಮಿತ್ರ ಪಕ್ಷಗಳ ಸಲಹೆಯನ್ನು ಆಲಿಸಿ ನಂತರ ಅಭ್ಯರ್ಥಿಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ’ ಹೇಳಿದ್ದು, ಈ ಭೇಟಿ ನಡುವೆ ಬಿಜೆಪಿಯ ಮಿತ್ರ ಪಕ್ಷ ಶಿವಸೇನಾದ ಮಖ್ಯಸ್ಥ ಉದ್ಧವ್‌ ಠಾಕ್ರೆಯವರೊಡನೆಯೂ ಮಾತುಕತೆ ನಡೆಸಲಿದ್ದಾರೆ.

ಭಾನುವಾರ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯ ಫೈನಲ್‌ ಪಂದ್ಯದಲ್ಲಿ ಭಾರತ, ಪಾಕಿಸ್ತಾನ ತಂಡಗಳು ಎದುರಾಗಲಿರುವ ಕುರಿತು,
‘ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಎರಡೂ ತಂಡಗಳ ನಡುವೆ ಆಟ ಮಂದುವರಿಸಲಿವೆ. ಆದರೆ, ಭಾರತದಲ್ಲಿಯಾಗಲಿ ಪಾಕಿಸ್ತಾನದಲ್ಲಿಯಾಗಲಿ ಪರಸ್ಪರ ಪಂದ್ಯಾವಳಿಗಳನ್ನು ಆಯೋಜಿಸುವುದಿಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.