ನವದೆಹಲಿ (ಐಎಎನ್ಎಸ್): ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿಯ ಪ್ರಸ್ತಾವನೆಯೂ ರಾಜ್ಯಸಭೆಯಲ್ಲಿ ಮಂಗಳವಾರ ಮತ್ತೊಮ್ಮೆ ಪ್ರತಿಧ್ವನಿಸಿದ ಪರಿಣಾಮ ಸದನದ ಕಲಾಪವನ್ನು ಮುಂದೂಡಿದ ಪ್ರಸಂಗ ನಡೆಯಿತು.
ರಾಜ್ಯಸಭೆ ಕಲಾಪ ಬೆಳಿಗ್ಗೆ ಆರಂಭವಾಗುತ್ತಿದ್ದಂತೆ ಮೀಸಲಾತಿ ಮಸೂದೆಯನ್ನು ಪ್ರಸ್ತಾಪಿಸಲಾಯಿತು. ಮೀಸಲಾತಿ ತಿದ್ದುಪಡಿ ಮಸೂದೆಯ ಪ್ರಸ್ತಾವನೆಯು ಹಾಸ್ಯಾಸ್ಪದವಾಗಿದೆ ಎಂದು ಸಮಾಜವಾದಿ ಪಕ್ಷದ ಸದಸ್ಯರು ಆರೋಪಿಸಿ, ಪ್ರತಿಭಟನೆಯನ್ನು ನಡೆಸಿದರು.
ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದ ವಿರೋಧದ ನಂತರವೂ ಪುನಃ ಸದನದಲ್ಲಿ ಮಸೂದೆಯನ್ನು ಪ್ರಸ್ತಾಪಿಸಲಾಗಿದೆ ಎಂದು ಸಮಾಜವಾದಿ ಪಕ್ಷದ ಸದಸ್ಯರು ಸದನದಲ್ಲಿ ಗದ್ದಲ ಉಂಟುಮಾಡಿದರು. ಇದರಿಂದಾಗಿ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ಕಲಾಪವು ಮಧ್ಯಾಹ್ನ ಸೇರುತ್ತಿದ್ದಂತೆ ಸಮಾಜವಾದಿ ಪಕ್ಷದ ಸದಸ್ಯರು ಮಸೂದೆ ತಿದ್ದುಪಡಿಗೆ ಆಕ್ಷೇಪಿಸಿ ಪ್ರತಿಭಟನೆ ನಡೆಸಿದರು.
ರಾಜ್ಯಸಭೆ ಉಪಸಭಾಪತಿ ಪಿ.ಜೆ. ಕುರಿಯನ್ ಕಲಾಪವನ್ನು ಮುಂದೂಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.