ಬೆಂಗಳೂರು: `ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ 2010ರ ಜೂನ್ 27ರಂದು ಉಗ್ರಗಾಮಿಗಳನ್ನು ಹೊಡೆದುರುಳಿಸಿದ ಭಾರತೀಯ ಭೂಸೇನೆಯ ತಂಡದಲ್ಲಿ ಮದ್ರಾಸ್ ರೆಜಿಮೆಂಟ್ನ ಯೋಧ ನಾಗಲಿಂಗಂ ಪಂಚವರ್ಣಂ ಅವರೂ ಒಬ್ಬರಾಗಿದ್ದರು. ಗುಂಡಿನ ಚಕಮಕಿಯಲ್ಲಿ ತನ್ನ ತೊಡೆಗೆ ಗುಂಡು ತಾಗಿ ತೀವ್ರ ರಕ್ತಸ್ರಾವವಾಗುತ್ತಿದ್ದರೂ ಲೆಕ್ಕಿಸದೆ, ಉಗ್ರರ ಸದೆಬಡೆಯುವಲ್ಲಿ ನಾಗಲಿಂಗಂ ಅವರು ಯಶಸ್ಸು ಸಾಧಿಸಿದರು.
ಅವರ ಶೌರ್ಯದ ಕಾರಣ ಭದ್ರತಾ ಪಡೆಗೆ ಮೂವರು ಉಗ್ರಗಾಮಿಗಳನ್ನು ಕೊಲ್ಲಲು ಸಾಧ್ಯವಾಯಿತು...~
- ಇದು ನಾಗಲಿಂಗಂ ಪಂಚವರ್ಣಂ ಅವರಿಗೆ ನೀಡಿದ ಮರಣೋತ್ತರ ಸೇನಾ ಪದಕವನ್ನು ಅವರ ತಾಯಿ ಪಿ. ಸೆಲ್ಲಮ್ಮಾಳ್ ಅವರು ಲೆಫ್ಟಿನೆಂಟ್ ಜನರಲ್ ಎ.ಕೆ. ಸಿಂಗ್ ಅವರಿಂದ ಪಡೆಯುವ ಸಂದರ್ಭ ಸೇನೆಯ ಅಧಿಕಾರಿಗಳಿಂದ ಕೇಳಿಬಂದ ಪ್ರಶಂಸೆಯ ಮಾತುಗಳು. ಪುತ್ರನ ಕುರಿತು ಕೇಳಿಬಂದ ಮಾತುಗಳು ಸೆಲ್ಲಮ್ಮಾಳ್ ಕಣ್ಣಿನಲ್ಲಿ ನೀರುಕ್ಕಿಸಿದ್ದವು.
ಅಪ್ರತಿಮ ಶೌರ್ಯಕ್ಕಾಗಿ ಮರಣೋತ್ತರ ಸೇನಾ ಪದಕ ಪಡೆದ ಇನ್ನೊಬ್ಬ ಯೋಧ ಪನ್ನೀರ್ ಸೆಲ್ವಂ ರಾಜೇಂದ್ರನ್ ಕುರಿತು ಸೇನೆಯ ಅಧಿಕಾರಿಗಳು ಆಡಿದ ಮೆಚ್ಚುಗೆಯ ಮಾತು ಹೀಗಿತ್ತು: `ನಾಗಲಿಂಗಂ ಅವರ ಜೊತೆಯಲ್ಲೇ ಇದ್ದ ರಾಜೇಂದ್ರನ್ ಅವರ ಹಣೆಗೆ ಉಗ್ರಗಾಮಿಗಳು ಹಾರಿಸಿದ ಒಂದು ಗುಂಡು ಹೊಕ್ಕಿತು. ರಕ್ತಸ್ರಾವ ತೀವ್ರವಾಗಿದ್ದರೂ ಧೈರ್ಯ ಕಳೆದುಕೊಳ್ಳದ ರಾಜೇಂದ್ರನ್, ಮೂರು ಮಂದಿ ಉಗ್ರಗಾಮಿಗಳತ್ತ ಗುಂಡಿನ ಮಳೆ ಸುರಿಯುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಉಗ್ರಗಾಮಿಯೊಬ್ಬ ಎಸೆದ ಗ್ರೆನೇಡ್ ಅವರ ಬಳಿಯೇ ಸ್ಫೋಟಿಸಿದ ಕಾರಣ, ರಾಜೇಂದ್ರನ್ ಸಾವಿಗೀಡಾದರು.~
ರಾಜೇಂದ್ರನ್ ಅವರಿಗೆ ನೀಡಿದ ಮರಣೋತ್ತರ ಸೇನಾ ಪದಕ ಪಡೆದುಕೊಂಡ ಅವರ ಪತ್ನಿ ಜ್ಯೋತಿ ಅವರಿಗೆ ಒತ್ತರಿಸಿ ಬರುತ್ತಿದ್ದ ಕಣ್ಣೀರು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಕಣ್ಣೀರು ಒರೆಸಿಕೊಳ್ಳುತ್ತಲೇ ಅವರು ವೇದಿಕೆಯಿಂದ ಇಳಿದರು.
ಯುದ್ಧ, ಗಲಭೆ, ಸಂಘರ್ಷ ಮತ್ತು ಸೇನೆಯ ವಿವಿಧ ಕಾರ್ಯಾಚರಣೆಯಲ್ಲಿ ಅಪ್ರತಿಮ ಶೌರ್ಯ ಪ್ರದರ್ಶಿಸಿದ 58 ಮಂದಿ ಯೋಧರಿಗೆ ಲೆಫ್ಟಿನೆಂಟ್ ಜನರಲ್ ಎ.ಕೆ. ಸಿಂಗ್ ಅವರು ಭಾರತೀಯ ಸೇನಾ ದಿನವಾದ ಭಾನುವಾರ (ಜನವರಿ 15) ಇಲ್ಲಿನ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ನಲ್ಲಿ ಪದಕ ಪ್ರದಾನ ಮಾಡಿ ಗೌರವಿಸಿದರು.
ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು, ಗೌರವ ಸ್ವೀಕರಿಸಿದ ಯೋಧರ ಆತ್ಮೀಯರು, ಸಹೋದ್ಯೋಗಿಗಳು ಈ ಕ್ಷಣಕ್ಕೆ ಸಾಕ್ಷಿಯಾದರು. ಒಂದು ಯುದ್ಧ ಸೇವಾ ಪದಕ, ಅಪ್ರತಿಮ ಶೌರ್ಯಕ್ಕಾಗಿ 31 ಯೋಧರಿಗೆ ಸೇನಾ ಪದಕ, ಅಸಾಮಾನ್ಯ ಸೇವೆಗಾಗಿ ಐವರು ಯೋಧರಿಗೆ ಸೇನಾ ಪದಕ ಮತ್ತು 21 ಯೋಧರಿಗೆ ವಿಶಿಷ್ಟ ಸೇವಾ ಪದಕ ಪ್ರದಾನ ಮಾಡಲಾಯಿತು. ಮರಣೋತ್ತರ ಪದಕಗಳನ್ನು ಯೋಧರ ಸಂಬಂಧಿಗಳಿಗೆ ನೀಡಲಾಯಿತು.
ಪದಕ ಪ್ರದಾನ ಮಾಡಿ ಮಾತನಾಡಿದ ಎ.ಕೆ. ಸಿಂಗ್ ಅವರು, `ಯೋಧರ ಸಂಖ್ಯಾ ದೃಷ್ಟಿಯಿಂದ ಭಾರತೀಯ ಸೇನೆಗೆ ವಿಶ್ವದಲ್ಲಿ ಎರಡನೆಯ ಸ್ಥಾನವಿದೆ. ಯೋಧರ ಶೌರ್ಯವೇ ಸೇನೆಯ ಶಕ್ತಿ~ ಎಂದು ನುಡಿದರು.
ಪದಕ ಪಡೆದ ಯೋಧರು ಇವರು...
ಮರಣೋತ್ತರ ಸೇನಾ ಪದಕ: ಮೇಜರ್ ಅತುಲ್ ಗರ್ಜೆ (ಗರ್ಜೆ ಅವರ ಪತ್ನಿ ಹರ್ಷಲಾ ಅವರಿಗೆ), ಮೇಜರ್ ಭಾನು ಚಂದರ್ (ಪತ್ನಿ ವಿದಿಶಾ ಅವರಿಗೆ), ಪನ್ನೀರ್ ಸೆಲ್ವಂ ರಾಜೇಂದ್ರನ್ (ಪತ್ನಿ ಜ್ಯೋತಿ), ರಾಕೇಶ್ ಕುಮಾರ್ ಗುಪ್ತ (ಪತ್ನಿ ಕಿರಣ್), ನಾಗಲಿಂಗಂ ಪಂಚವರ್ಣಂ (ತಾಯಿ ಪಿ. ಸೆಲ್ಲಮ್ಮಾಳ್).
ಯುದ್ಧ ಸೇವಾ ಪದಕ: ಕರ್ನಲ್ ಅಮರ್ ರಾಮದಾಸನಿ
ಸೇನಾ ಪದಕ: ಮೇಜರ್ ರಾಜೀವ್ ಶಂಕರ್, ಲೆಫ್ಟಿನೆಂಟ್ ಕರ್ನಲ್ ಸಿದ್ಧಾರ್ಥ ಖನ್ನಾ, ಮೇಜರ್ ಧೀರಜ್ ಕೊತ್ವಾಲ್, ಮೇಜರ್ ಗೌರವ್ ಕನ್ವಾಲ್, ಮೇಜರ್ ಗೌರವ್ ಭಾಟಿಯಾ, ಮೇಜರ್ ರಣಜಿತ್ ಸಿಂಗ್, ಮೇಜರ್ ಗುರ್ಜಿಂದರ್ ಸಿಂಗ್ ಗುಜ್ರಾಲ್, ಮೇಜರ್ ಮೃಣಾಲ್ ಕುಮಾರ್ ಶೇಖರ್, ಮೇಜರ್ ಸುಜಿತ್ ಕುಮಾರ್ ಕೃಷ್ಣನ್, ಮೇಜರ್ ಆಶಿಶ್ ಸ್ವರೂಪ್, ಮೇಜರ್ ಅಮನ್ದೀಪ್ ಸಿಂಗ್, ಮೇಜರ್ ಬಿ.ಎಸ್. ಮಧುಸೂದನ್ (ಕರ್ನಾಕಟದ ಯೋಧ), ಮೇಜರ್ ಸಚಿನ್ ಸಿನ್ಹಾ, ಮೇಜರ್ ಅಮನ್ ಅಹ್ಲುವಾಲಿಯಾ, ಕ್ಯಾಪ್ಟನ್ ವರುಣ್ ಖಜುರಿಯಾ, ಕ್ಯಾಪ್ಟನ್ ರತಿಕಾಂತ ಮಹಾಪಾತ್ರ. ಮೇಜರ್ ನವರತ್ನ ಜೈಮಾನ್, ಸುಬೇದಾರ್ ಡಿ. ರವಿಕುಮಾರ್, ಹವಾಲ್ದಾರ್ ಬಿ. ಧರ್ಮಶೀಲ ಸೂರ್ಯಕಾಂತ್, ಹವಾಲ್ದಾರ್ ಕೆ.ಬಿ. ಲವ (ಕರ್ನಾಟಕದ ಯೋಧ), ಅನಿರುದ್ಧ ಕುಂದು, ಪವನ್, ಭೂಪಾಲ್ ಸಿಂಗ್, ವಿಕ್ರಾಂತ್ ಹಿಂದೂರಾವ್ ಭೋಸ್ಲೆ, ದಲ್ಜಿತ್ ಸಿಂಗ್, ಕರ್ನಲ್ ನಿರಂಜನ್ ರಾಜ್ಕುಮಾರ್, ಬ್ರಿಗೇಡಿಯರ್ ಸುಭಾಷ್ ಚಂದರ್ ರಂಗಿ, ಕರ್ನಲ್ ರಾಜ್ಕುಮಾರ್, ಕರ್ನಲ್ ಸುಧಾಕರ ಶೇಟೆ, ಕರ್ನಲ್ ಅವತಾರ್ ಸಿಂಗ್.
ವಿಶಿಷ್ಟ ಸೇವಾ ಪದಕ: ಜನರಲ್ ಬಲ್ವಿಂದರ್ ಸಿಂಗ್ ಸಾಚಾರ್, ಲೆಫ್ಟಿನೆಂಟ್ ಜನರಲ್ ಫಿಲಿಪ್ ಕ್ಯಾಂಪೋಸ್, ಮೇಜರ್ ಜನರಲ್ ಚಾಕೊ ತಾರಕನ್, ಮೇಜರ್ ಜನರಲ್ ಸುಬ್ರತೊ ಮಿತ್ರಾ, ಮೇಜರ್ ಜನರಲ್ ರಣಜಿತ್ ಸಿಂಗ್, ನಿವೃತ್ತ ಮೇಜರ್ ಜನರಲ್ ತಾಜುದ್ದೀನ್ ಮೌಲಾಲಿ, ಮೇಜರ್ ಜನರಲ್ ಮೋಹನ್ ಪ್ರಹ್ಲಾದ ರಾವ್ (ಕರ್ನಾಟಕ), ಬ್ರಿಗೇಡಿಯರ್ ಮಂಜೀತ್ ಮೆಹ್ತಾ, ಬ್ರಿಗೇಡಿಯರ್ ರಾಜವೀರ್ ಸಿಂಗ್, ಬ್ರಿಗೇಡಿಯರ್ ಕೆ. ರವಿಪ್ರಸಾದ್, ಬ್ರಿಗೇಡಿಯರ್ ಎಂ. ಮಂಗಳಮೂರ್ತಿ (ಕರ್ನಾಟಕ), ಬ್ರಿಗೇಡಿಯರ್ ಕೃಷ್ಣ ವೆಂಕಟೇಶ ಬಾಳಿಗಾ, ಕರ್ನಲ್ ರಾಜೀವ್ ಪನ್ವಾರ್, ನಿವೃತ್ತ ಕರ್ನಲ್ ವಿನೀತ್ ಸೇಠ್, ಕರ್ನಲ್ ರಾಜೇಂದ್ರ ಕುಮಾರ್, ಕರ್ನಲ್ ದಿನೇಶ್ ಸಿಂಗ್, ಕರ್ನಲ್ ಆರ್. ಷಣ್ಮುಗ ಸುಂದರಂ, ಕರ್ನಲ್ ಪಿ.ಎಸ್. ಪುನಿಯಾ, ಕರ್ನಲ್ ಅನುರಾಗ್ ಖನ್ನಾ, ಲೆಫ್ಟಿನೆಂಟ್ ಕರ್ನಲ್ ಭಾವಿಕ್ ಕೌಲ್, ಸುಬೇದಾರ್ ಚೆವಾಂಗ್ ಮುತುಪ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.