ADVERTISEMENT

ಮಲೆಯಾಳಂ ಸಾಹಿತಿ ಸುಕುಮಾರ್ ಅಯಿಕ್ಕೋಡ್ ನಿಧನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ತ್ರಿಶ್ಶೂರ್ (ಪಿಟಿಐ): ಖ್ಯಾತ ಮಲೆಯಾಳಂ ಸಾಹಿತಿ ಹಾಗೂ ವಾಗ್ಮಿ ಸುಕುಮಾರ್ ಅಯಿಕ್ಕೋಡ್ (86) ಮಂಗಳವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಸುಮಾರು ಐದು ದಶಕಗಳ ಕಾಲ ತಮ್ಮ ಬರಹಗಳ ಮೂಲಕ ಮಲೆಯಾಳಂ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದ ಅವರು ವಿಮರ್ಶಕರಾಗಿಯೂ ಖ್ಯಾತಿ ಗಳಿಸಿದ್ದರು. ಜತೆಗೆ ಶಿಕ್ಷಣ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಮಿಂಚಿದ್ದರು. ಅಲ್ಲದೇ ವಿವಾದಗಳಿಂದಾಗಿಯೂ ಅವರು ಆಗಾಗ್ಗೆ ಸುದ್ದಿಯಲ್ಲಿದ್ದರು.

ಅವಿವಾಹಿತರಾಗಿದ್ದ ಅವರು, ಕಳೆದ ಕೆಲವು ವಾರಗಳಿಂದ ಇಲ್ಲಿನ ಅಮಲಾ ಕ್ಯಾನ್ಸರ್ ಸೆಂಟರ್‌ನಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತ್ದ್ದಿದರು. ಅಯಿಕ್ಕೋಡ್ ಅವರ ಆರೋಗ್ಯ ಮೂರು ದಿನಗಳ ಹಿಂದೆ ತೀರಾ ಹದಗೆಟ್ಟಿತ್ತು.
ನ್ಯಾಷನಲ್ ಬುಕ್ ಟ್ರಸ್ಟ್ (ಎನ್‌ಬಿಟಿ)ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅವರು, ಕೇರಳ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಭಾರತೀಯ ತತ್ವಶಾಸ್ತ್ರ, ಉಪನಿಷತ್ ಮತ್ತು ವೇದಗಳ ಕುರಿತು 1984ರಲ್ಲಿ ಅವರು ಬರೆದ `ತತ್ವಮಸಿ~ ಅವರ ಖ್ಯಾತ ಕೃತಿಗಳಲ್ಲಿ ಒಂದಾಗಿದ್ದು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ವಯಲಾರ್ ಪ್ರಶಸ್ತಿ ಸೇರಿದಂತೆ ಒಟ್ಟು 12 ಪ್ರಶಸ್ತಿಗಳು ಈ ಕೃತಿಗೆ ದೊರೆತಿದ್ದವು.

2007ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸುವ ಮೂಲಕ ಅವರು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ್ದರು.

ಅಯಿಕ್ಕೋಡ್ ಅವರ ಅಂತ್ಯಸಂಸ್ಕಾರ ಬುಧವಾರ 11 ಗಂಟೆಗೆ ಕಣ್ಣೂರಿನ ಪಯ್ಯಂಬಲದಲ್ಲಿ ನೆರವೇರಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.