ADVERTISEMENT

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಚಲಿಸುತ್ತಿದ್ದ ಕಾರಿನಲ್ಲಿ ಬಂದೂಕಿನಿಂದ ಬೆದರಿಸಿ ದುಷ್ಕೃತ್ಯ

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 19:30 IST
Last Updated 24 ಜುಲೈ 2014, 19:30 IST

ನವದೆಹಲಿ (ಪಿಟಿಐ): ಚಲಿಸುತ್ತಿದ್ದ ಕಾರಿ­ನಲ್ಲಿ ಬಂದೂ­ಕಿ­ನಿಂದ ಬೆದರಿಸಿ ವಿವಾ­ಹಿತೆಯ ಮೇಲೆ ಸಾಮೂ­ಹಿಕ ಅತ್ಯಾ­ಚಾರ ನಡೆಸಿ, ಆಕೆಯನ್ನು ದೋಚಿದ ಘಟನೆ ದೆಹಲಿಯ ದ್ವಾರಕಾ ಪ್ರದೇಶ­ದಲ್ಲಿ ಬುಧವಾರ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2012ರ ಡಿಸೆಂಬರ್‌ನಲ್ಲಿ ಪ್ಯಾರಾ­ಮೆಡಿಕಲ್‌ ವಿದ್ಯಾರ್ಥಿನಿಯ ಮೇಲೆ ಚಲಿಸುತ್ತಿದ್ದ ಬಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಈ ಘಟನೆ ನೆನಪಿಸುತ್ತದೆ.

ಏನಾಯಿತು?:  ‘23 ವರ್ಷದ ಈ ಮಹಿಳೆ ಬುಧವಾರ ರಾತ್ರಿ ಗುಡ­ಗಾಂವ್‌ನ ಮಾಲ್‌ಗೆ ಭೇಟಿ ನೀಡಿದ್ದರು. ಮನೆಗೆ ವಾಪಸಾಗಲು ವಾಹನಕ್ಕಾಗಿ ಕಾಯುತ್ತಿದ್ದರು. ಕಾರಿನಲ್ಲಿ ಬಂದ ನಾಲ್ವರು ಅಪರಿಚಿತರು ಆಕೆಯನ್ನು ಮನೆಗೆ ಬಿಡುವುದಾಗಿ ಹೇಳಿದರು. ಇದಕ್ಕೆ ಒಪ್ಪಿದ ಮಹಿಳೆ ಕಾರು ಹತ್ತಿದರು. ಕಾರಿನಲ್ಲಿದ್ದ ನಾಲ್ವರಲ್ಲಿ ಮೂವರು ಆಕೆಯನ್ನು ಬಂದೂಕಿನಿಂದ ಬೆದರಿಸಿ  ಅತ್ಯಾಚಾರ ಎಸಗಿದರು. ಅಲ್ಲದೇ ಆಕೆಯ ಬಳಿ ಇದ್ದ ₨ 50,000 ದೋಚಿ, ನಿರ್ಜನ ಪ್ರದೇಶದಲ್ಲಿ ಇಳಿಸಿ, ವಿಷಯ ಬಾಯಿ ಬಿಡದಂತೆ ಬೆದರಿಕೆ ಹಾಕಿ ಹೋದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಅಲ್ಲಿಂದ ತೆರಳಿದ ಬಳಿಕ ಮಹಿಳೆ ಪೊಲೀಸ್‌ ನಿಯಂತ್ರಣ ಕೊಠ­ಡಿಗೆ ಕರೆ ಮಾಡಿದರು. ಕೂಡಲೇ ಅವ­ರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ಮೇಲೆ ಅತ್ಯಾಚಾರ ನಡೆದಿ­ರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.
ಪೊಲೀಸರು ಮಹಿಳೆಯಿಂದ ಹೇಳಿಕೆ ಪಡೆದಿದ್ದು, ತನಿಖೆ ನಡೆಯುತ್ತಿದೆ.

ಬಾಲಕಿ ಮೇಲೆ ಅತ್ಯಾಚಾರ ನಡೆಸಿ ನೇಣು ಹಾಕಿದರು
ತಮ್ಲುಕ್‌ (ಪಶ್ಚಿಮ ಬಂಗಾಳ) (ಪಿಟಿಐ): ಎಂಟು ವರ್ಷದ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ನಂತರ ಆಕೆ ಹತ್ಯೆ ಮಾಡಿದ ದುಷ್ಕರ್ಮಿಗಳು  ಶವವನ್ನು  ಮರವೊಂದಕ್ಕೆ ನೇತು ಹಾಕಿದ ಹೃದಯ ವಿದ್ರಾವಕ ಘಟನೆ ಗುರುವಾರ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಶಂಕಿಸಲಾದ ಆಕೆಯ ಮನೆಯ ಹತ್ತಿರದ ರತನ್‌ ದಾಸ್ ಹಾಗೂ ಆತನ ಇಬ್ಬರು ಸಹಚರರನ್ನು ಗ್ರಾಮ­ಸ್ಥರು ಹಿಗ್ಗಾಮುಗ್ಗ ಥಳಿಸಿದ್ದು, ದಾಸ್‌ ತಾಂತ್ರಿಕ ಎಂದು ಹೇಳಲಾಗಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟಿ­ದ್ದಾನೆ. ತೀವ್ರ­ವಾಗಿ ಗಾಯಗೊಂಡಿರುವ ಆತನ ಇಬ್ಬರು ಸಹಚರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು­ತ್ತಿದ್ದು, ಅವರ ಸ್ಥಿತಿಯೂ ಗಂಭೀರವಾಗಿದೆ.
ಗ್ರಾಮಸ್ಥರು ದಾಸ್‌ ಮನೆಗೆ ಬೆಂಕಿ ಹಚ್ಚಿದ್ದಾರೆ. ಘಟನೆಯ ನಂತರ ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ.

ಪೂರ್ವ ಮಿಡ್ನಾಪುರ ಜಿಲ್ಲೆಯ ಕಾಲಿಬಜಾರ್‌ ಗ್ರಾಮದಿಂದ ಬುಧವಾರ ಸಂಜೆ 5ಗಂಟೆಯ ನಂತರ ಬಾಲಕಿ ಏಕಾಏಕಿ ಕಾಣೆಯಾಗಿದ್ದಳು. ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಹುಡುಕಾಟ ನಂತರ ಆಕೆ ಪತ್ತೆಯಾಗದಿದ್ದಾಗ ಪೊಲೀಸರಿಗೆ ದೂರು ನೀಡಿದ್ದರು.

ಗುರುವಾರ ಬೆಳಿಗ್ಗೆ ಮನೆಯ ಹತ್ತಿರದ ಮರವೊಂದರಲ್ಲಿ ನೇತಾಡುವ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದ್ದು, ಶವಪರೀಕ್ಷೆಗೆ ಕಳಿಸಲಾಗಿದೆ.

ಬಾಲಕಿಯ ತಂದೆ ತಮ್ಮ ಮನೆಯ ಸಮೀಪದ ರತನ್‌ ದಾಸ್‌ ಹಾಗೂ ಆತನ ಇಬ್ಬರು ಸಹಚರರ ಮೇಲೆ ಶಂಕೆ ವ್ಯಕ್ತಪಡಿಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT